ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಪಕ್ಷದ ಹಿರಿಯ ಮುಖಂಡ ಆಜಂ ಖಾನ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಊಹಾಪೋಹದ ನಡುವೆ ಉತ್ತರ ಪ್ರದೇಶದ ವಿಧಾನಸಭೆಯ ಕಲಾಪಕ್ಕೆ ಎರಡನೇ ದಿನವಾದ ಮಂಗಳವಾರ ಕೂಡ ಆಜಂ ಖಾನ್ ಗೈರಾದರು.
ಸೋಮವಾರ ಸದನ ಆರಂಭಕ್ಕೂ ಮುನ್ನ ಸ್ಪೀಕರ್ ಸತೀಶ್ ಮಹನ್ ಅವರ ಕೊಠಡಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಆಜಂ ಖಾನ್, ವಿಧಾನಸಭೆ ಕಾರ್ಯ ಕಲಾಪಕ್ಕೆ ಹಾಜರಾಗದೆ ದೂರ ಉಳಿದಿದ್ದರು.
ಭೂ ಕಬಳಿಕೆ ಸೇರಿದಂತೆ ಹಲವು ಪ್ರಕರಣದಲ್ಲಿ ಜೈಲು ಸೇರಿದ್ದ ಆಜಂ ಖಾನ್ ಇತ್ತೀಚಿಗೆ ಸೀತಾಪುರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.
ಅಧಿವೇಶನದಲ್ಲಿ ಆಜಂ ಖಾನ್ ಭಾಗವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಅವರ ಪುತ್ರ ಅಬ್ದುಲ್ ಆಜಂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಆಜಂ ಖಾನ್ ಸೋಮವಾರ ಸಂಜೆ ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೊಹಿಯಾ(ಪಿಎಸ್ಪಿಎಲ್) ಸಂಸ್ಥಾಪಕ ಶಿವಪಾಲ್ ಯಾದವ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆಜಂ ಖಾನ್ ಅವರು ತಮ್ಮ ವಕೀಲ ಕಬೀಲ್ ಸಿಬಿಲ್ಗೆ ಎಸ್ಪಿಯಿಂದ ರಾಜ್ಯಸಭಾಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಆಜಂ ಖಾನ್ ಮತ್ತು ಎಸ್ಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 111 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಎಸ್ಪಿ ಜುಲೈನಲ್ಲಿ ರಾಜ್ಯಸಭೆಯಲ್ಲಿ ತೆರವುಗೊಳ್ಳಲಿರುವ 11 ಸ್ಥಾನಕ್ಕೆ ಮೂವರನ್ನು ಆಯ್ಕೆ ಮಾಡಬಹುದಾಗಿದೆ. ಮಂಗಳವಾರ ರಾಜ್ಯಸಭೆಯ ಚುನಾವಣೆಯ ಪ್ರಕ್ರಿಯೆ ಆರಂಭವಾಗಿದೆ.
ಕಪಿಲ್ ಸಿಬಲ್ ಹಲವು ವರ್ಷಗಳಿಂದ ಸುಪ್ರೀಂಕೋರ್ಟ್ನಲ್ಲಿ ಆಜಂ ಖಾನ್ ಪರ ವಕೀಲರಾಗಿದ್ದು, ಎಸ್ಪಿ ಬೆಂಬಲದೊಂದಿಗೆ 2016ರಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.