ಸಹರಾನ್ಪುರ (ಉತ್ತರಪ್ರದೇಶ): ಇಲ್ಲಿನ ದೇವಬಂದ್ ಪ್ರದೇಶದಲ್ಲಿ ನಾಯಿಯೊಂದನ್ನು ಅಮಾನುಷವಾಗಿ ಹೊಡೆದು ಕೊಠಡಿಯಲ್ಲಿ ಕೂಡಿ ಹಾಕಿದ್ದ ಆಪಾದನೆಯ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ವ್ಯಕ್ತಿಯು ನಾಯಿಯನ್ನು ಹಿಂಸಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಪೊಲೀಸರ ತಂಡ ನಾಯಿಯನ್ನು ರಕ್ಷಿಸಿ, ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಆರೋಪಿ ಕುಲದೀಪ್ ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ (ಗ್ರಾಮೀಣ) ಸಾಗರ್ ಜೈನ್ ಹೇಳಿದ್ದಾರೆ.
ಆರೋಪಿಯು ಆಗಾಗ್ಗೆ ನಾಯಿಗಳಿಗೆ ಹೊಡೆಯುವ ಚಾಳಿ ರೂಢಿಸಿಕೊಂಡಿರುವುದು ತನಿಖೆಯ ವೇಳೆ ಗೊತ್ತಾಗಿದೆ. ಆರೋಪಿಯು ನಾಯಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸುತ್ತಿರುವ ಬಗ್ಗೆ ಬುಧವಾರ ಪೊಲೀಸರಿಗೆ ಮಾಹಿತಿ ಲಭಿಸಿತ್ತು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.