ADVERTISEMENT

ಉತ್ತರ ಪ್ರದೇಶ: ಮುರ್ಮುರನ್ನು ಬೆಂಬಲಿಸಿದ ರಾಜ್‌ಭರ್‌ಗೆ ವೈ ಶ್ರೇಣಿ ಭದ್ರತೆ

ಪಿಟಿಐ
Published 22 ಜುಲೈ 2022, 12:54 IST
Last Updated 22 ಜುಲೈ 2022, 12:54 IST
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಓಂ ಪ್ರಕಾಶ್ ರಾಜ್‌ಭರ್ – ಪಿಟಿಐ ಚಿತ್ರ
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಓಂ ಪ್ರಕಾಶ್ ರಾಜ್‌ಭರ್ – ಪಿಟಿಐ ಚಿತ್ರ   

ಲಖನೌ: ‘ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ’ದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರಿಗೆ ಉತ್ತರ ಪ್ರದೇಶ ಸರ್ಕಾರ ‘ವೈ’ ಶ್ರೇಣಿಯ ಭದ್ರತೆ ಒದಗಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

‘ವೈ’ ಶ್ರೇಣಿ ಭದ್ರತೆ ಅಡಿ ಅವರಿಗೆ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್‌ಒ) ಸೇರಿದಂತೆ ಒಟ್ಟು 11 ಮಂದಿ ಸಿಬ್ಬಂದಿಯ ರಕ್ಷಣೆ ದೊರೆಯಲಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕಿಂತ ಭಿನ್ನ ನಿಲುವು ತಳೆದಿದ್ದ ರಾಜ್‌ಭರ್ ಪಕ್ಷದ ಪ್ರತಿನಿಧಿಗಳು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರ ಮತ ಚಲಾಯಿಸಿದ್ದರು.

ರಾಜ್‌ಭರ್‌ಗೆ ‘ವೈ’ ಶ್ರೇಣಿಯ ಭದ್ರತೆ ದೊರೆಯಲಿರುವ ವಿಚಾರವನ್ನು ಅವರ ಪುತ್ರ, ಎಸ್‌ಬಿಎಸ್‌ಪಿಯ ರಾಷ್ಟ್ರೀಯ ವಕ್ತಾರ ಅರ್ಜುನ್ ಖಚಿತಪಡಿಸಿದ್ದಾರೆ.

ಎಸ್‌ಬಿಎಸ್‌ಪಿಯು ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಬೆಂಬಲಿಸುವ ವಿಚಾರವಾಗಿ ಈ ತಿಂಗಳ ಆರಂಭದಲ್ಲಿ ನಡೆದಿದ್ದ ಸಭೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯದವ್ ಅವರು ರಾಜ್‌ಭರ್ ಅವರನ್ನು ಆಹ್ವಾನಿಸಿರಲಿಲ್ಲ. ಮತ್ತೊಂದು ಮಿತ್ರಪಕ್ಷ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸಭೆಯಲ್ಲಿ ಭಾಗವಹಿಸಿದ್ದರು.

ಬಳಿಕ, ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ರಾಜ್‌ಭರ್ ಘೋಷಿಸಿದ್ದರು. ಆದಾಗ್ಯೂ, ತಮ್ಮ ಪಕ್ಷದ ಆರೂ ಶಾಸಕರು ಪ್ರತಿಪಕ್ಷಗಳ ಮೈತ್ರಿಕೂಟ ಭಾಗವಾಗಿಯೇ ಇದ್ದಾರೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.