ADVERTISEMENT

ದೇಶ ವಿಭಜಿಸಿದ ವ್ಯಕ್ತಿಯನ್ನು ಅಖಿಲೇಶ್ ಏಕೆ ನೆನಪಿಸಿಕೊಳ್ಳುತ್ತಿದ್ದಾರೆ?: ನಡ್ಡಾ

ಪಿಟಿಐ
Published 29 ಜನವರಿ 2022, 1:57 IST
Last Updated 29 ಜನವರಿ 2022, 1:57 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಬರೇಲಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಕುಮಾರ್ ಭಾರತವನ್ನು ಒಗ್ಗೂಡಿಸಿದ ವ್ಯಕ್ತಿಯ ಬದಲು ದೇಶದ ವಿಭಜನೆಗೆ ಕಾರಣವಾದ ವ್ಯಕ್ತಿಯನ್ನು ಏಕೆ ನೆನಪಿಸಿಕೊಳ್ಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಉದ್ದೇಶಿಸಿ ಭಾಷಣ ಮಾಡಿದ ನಡ್ಡಾ, 'ಭಾರತ ವಿಭಜನೆಗೆ ಕಾರಣವಾದ ವ್ಯಕ್ತಿಯನ್ನು ಅಖಿಲೇಶ್ ಏಕೆ ನೆನಪಿಸಿಕೊಳ್ಳುತ್ತಾರೆ? ದೇಶವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಏಕೆ ಸ್ಮರಿಸುತ್ತಿಲ್ಲ' ಎಂದು ಪ್ರಶ್ನಿಸಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಾತ್ಮ ಗಾಂಧಿ, ಜವಾಹರ್‌ಲಾಲ್ ನೆಹರೂ, ಸರ್ದಾರ್ ಪಟೇಲ್ ಅವರೊಂದಿಗೆ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರನ್ನು ಅಖಿಲೇಶ್ ಹೋಲಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಈ ಮೊದಲು ಅಖಿಲೇಶ್ ಯಾದವ್ ಅವರು ಪಾಕಿಸ್ತಾನದ ಬೆಂಬಲಿಗ ಮತ್ತು ಜಿನ್ನಾರ ಆರಾಧಕ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದರು.

ಚುನಾವಣೆಯಲ್ಲಿ ಕಬ್ಬಿನ ವಿಷಯವನ್ನು ಪ್ರಸಾಪಿಸಬೇಕೇ ಹೊರತು ಪಾಕಿಸ್ತಾನಿ ನಾಯಕನ ಹೆಸರಲ್ಲ ಎಂದು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಕೂಡ ಟೀಕೆ ಮಾಡಿದ್ದರು.

ಅಖಿಲೇಶ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಡ್ಡಾ, 'ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಅಭದ್ರತೆ ಕಾಡುತ್ತಿತ್ತು. ಕಾನೂನು, ಸುವ್ಯವಸ್ಥೆ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಮಾಫಿಯಾ ಶರಣಾಗತಿ ಆಗುತ್ತಿದ್ದು, ಜೈಲಿಗೆ ಕಳಹಿಸಲಾಗುತ್ತಿದೆ ಅಥವಾ ರಾಜ್ಯವನ್ನು ತೊರೆಯುತ್ತಿದ್ದಾರೆ' ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳಿಗೆ ಅಖಿಲೇಶ್ ಟಿಕೆಟ್ ನೀಡುತ್ತಿದ್ದಾರೆ ಎಂದು ಸಹ ನಡ್ಡಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.