
ಎಐ ಚಿತ್ರ
ಅಲಿಗಢ (ಉತ್ತರ ಪ್ರದೇಶ): ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟು 3 ವರ್ಷವಾಗಿದ್ದ ಮಹಿಳೆ, ನಾನು ಇನ್ನೂ ಬದುಕಿದ್ದೇನೆ ಎಂದು ಅಧಿಕಾರಿಗಳ ಎದುರು ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.
ಉತ್ತರ ಪ್ರದೇಶದ ಅಲಿಗಢದ 58 ವರ್ಷದ ಸರೋಜ ದೇವಿ ಎನ್ನುವ ಮಹಿಳೆ ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದಾರೆ. ಆದರೆ ಇದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವುದು ದುರಂತದ ಸಂಗತಿ.
ಸರೋಜ ದೇವಿ ಅವರ ಗಂಡ ಜಗದೀಶ್ ಪ್ರಸಾದ್ ಅವರು 2020ರಲ್ಲಿ ಮೃತಪಟ್ಟಿದ್ದರು. ಗಂಡನ ಮರಣ ಪತ್ರಕ್ಕಾಗಿ ಅವರು ಮತ್ತೆ ಮತ್ತೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಡನ ಮರಣ ಪತ್ರದ ಬದಲು, ತಮ್ಮದೇ ಮರಣ ಪತ್ರವು ಅವರ ಕೈಗೆ ಸೇರಿದೆ.
2022ರ ಜನವರಿಯಲ್ಲಿ ಘಟನೆ ಜರುಗಿದ್ದು, ಇದರಿಂದ ಜೀವಂತವಾಗಿದ್ದ ಸರೋಜ ದೇವಿ ಅವರು ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಅವರ ಆಧಾರ್ ಸೇರಿದಂತೆ ಹಲವು ಗುರುತಿನ ದಾಖಲೆಗಳು ನಿಷ್ಕ್ರೀಯವಾಗಿದೆ.
ಇದರಿಂದ ದೈನದಿಂದ ಜೀವನಕ್ಕೂ ತೊಂದರೆಯಾಗಿ ಹಲವು ಬಾರಿ ಅಧಿಕಾರಿಗಳ ಬಳಿ ತೆರಳಿದರು ಕೂಡ, ಅವರು ಇದನ್ನು ಸರಿಪಡಿಸಿಲ್ಲ.
ನ.15ರಂದು ತಹಸಿಲ್ ದಿವಸ್ ಕುಂದುಕೊರತೆ ವೇದಿಕೆಯಲ್ಲಿ ಸರೋಜ ದೇವಿ ಅವರು ಈ ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಶಶೀರ್ ಕುಮಾರ್ ಅವರು ಘಟನೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ, ದಾಖಲಾತಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.