ADVERTISEMENT

ಉತ್ತರ ಪ್ರದೇಶ: ಬೆಂಕಿ ಹಚ್ಚಿಕೊಂಡಿದ್ದ ಅತ್ಯಾಚಾರ ಸಂತ್ರಸ್ತೆ ಸಾವು, ಮೂವರ ಬಂಧನ

ಪಿಟಿಐ
Published 18 ನವೆಂಬರ್ 2020, 6:04 IST
Last Updated 18 ನವೆಂಬರ್ 2020, 6:04 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬುಲಂದ್‌ಶಹರ್‌ (ಉತ್ತರ ಪ್ರದೇಶ): ಆರೋಪಿಯ ಸಂಬಂಧಿಕರ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡಿದ್ದ ಅತ್ಯಾಚಾರ ಸಂತ್ರಸ್ತೆಯು ದೆಹಲಿಯ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಮಾವಿನ ತೋಟ ಕಾಯಲು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಮಹಿಳೆಯು ಆಗಸ್ಟ್‌ 15ರಂದು ದೂರು ನೀಡಿದ್ದರು. ಆರೋಪಿಯನ್ನು ಅಂದೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅಂದಿನಿಂದಲೂ ಆರೋಪಿಯ ಸಂಬಂಧಿಕರು ದೂರು ಹಿಂತೆಗೆದುಕೊಳ್ಳುವಂತೆ ಸಂತ್ರಸ್ತೆಗೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಸಂತ್ರಸ್ತೆ ಮಂಗಳವಾರ ಮುಂಜಾನೆ ಬೆಂಕಿ ಹಚ್ಚಿಕೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

‘ಸಂತ್ರಸ್ತೆಯ ತಂದೆ ನೀಡಿರುವ ಲಿಖಿತ ದೂರಿನ ಆಧಾರದಲ್ಲಿ ಮೂವರನ್ನು ಬಂಧಿಸಲಾಗಿದೆ. ಕರ್ತವ್ಯ ಲೋಪಕ್ಕಾಗಿ ಸಬ್‌ ಇನ್‌ಸ್ಪೆಕ್ಟರ್‌ ವಿನಯಕಾಂತ್‌ ಗೌತಮ್‌ ಮತ್ತು ಪೇದೆ ವಿಕ್ರಾಂತ್‌ ತೋಮರ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂತೋಷ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

‘ಜಹಾಂಗೀರಾಬಾದ್‌ ಪೊಲೀಸ್ ಠಾಣೆಯ ವಿವೇಕ್‌ ಶರ್ಮಾ,ಅನೂಪ್‌ಶಹರ್‌ನ‌ ಅತುಲ್‌ ಕುಮಾರ್‌ ಚೌಭೆ ಮತ್ತು ಇನ್‌ಸ್ಪೆಕ್ಟರ್‌ ಸುಭಾಷ್‌ ಸಿಂಗ್‌ ಅವರನ್ನು ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.