ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಂಬೇಡ್ಕರ್ವಾದಿಗಳು ಮತ್ತು ಸಮಾಜವಾದಿಗಳು ಜತೆಯಾಗಿ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಮೂಲಕ, ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳ ಜತೆಗೆ ಕೆಲಸ ಮಾಡಬೇಕು ಎಂಬ ರಾಮಮನೋಹರ ಲೋಹಿಯಾ ಅವರ ಅಪೇಕ್ಷೆ ಈಡೇರಲಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ಉಚ್ಚಾಟಿಸಲು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಸಮಯ ಬಂದಾಗ ಜನರು ತಮ್ಮ ಶೋಷಕರಿಗೆ ಪಾಠ ಕಲಿಸುತ್ತಾರೆ ಎಂದು ಸಂವಿಧಾನ ದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಖಿಲೇಶ್ ಹೇಳಿದ್ದಾರೆ.
ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್ ಅವರ ಮೊಮ್ಮಕ್ಕಳಾದ ಪ್ರಕಾಶ್ ಅಂಬೇಡ್ಕರ್, ಭೀಮರಾವ್ ಯಶವಂತ ರಾವ್ ಅಂಬೇಡ್ಕರ್, ಬಿಎಸ್ಪಿ ಸ್ಥಾಪಕ ಕಾನ್ಶೀರಾಂ ಸಹೋದರಿ ಸ್ವರ್ಣ ಕೌರ್, ಎಸ್ಬಿಎಸ್ಪಿ ಮುಖ್ಯಸ್ಥ ಓಂಪ್ರಕಾಶ್ ರಾಜ್ಭರ್ ಮತ್ತು ಅಪ್ನಾ ದಳ (ಕೆ) ನಾಯಕಿ ಪಲ್ಲವಿ ಪಟೇಲ್ ಅವರು ಈ ಕಾರ್ಯಕ್ರಮ ಸಂಘಟಿಸಿದ್ದರು.
‘ಅಂಬೇಡ್ಕರ್ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಕನಸನ್ನು ಲೋಹಿಯಾ ಹೊಂದಿದ್ದರು. ಈ ಕನಸು ಈಡೇರಿಲ್ಲ. ಅದನ್ನು ಈಡೇರಿಸುವ ಕನಸನ್ನು ನಾವು ಕೈಬಿಟ್ಟಿಲ್ಲ. 2022ರಲ್ಲಿ ಈ ಕನಸು ಖಂಡಿತವಾಗಿ ಈಡೇರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.