ಅಪಘಾತ
–ಪ್ರಾತಿನಿಧಿಕ ಚಿತ್ರ
ತೆಹ್ರಿ ಗರ್ವಾಲ್: ಕೇದಾರನಾಥಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ರಸ್ತೆಯಿಂದ ಜಾರಿ ಕೆಳಬದಿಯಲ್ಲಿದ್ದ ಮನೆಯ ಛಾವಣಿಯ ಮೇಲೆ ಬಿದ್ದಿದ್ದು, ಮೂವರು ಗಾಯಗೊಂಡ ಘಟನೆ ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಹ್ರಿ-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸ್ಯಾಲ್ಕುಂಡ್ನಲ್ಲಿ ಸೋಮವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಚಾಲಕ ಬಸ್ಅನ್ನು ರಸ್ತೆಬದಿ ನಿಲ್ಲಿಸಿ ಪಂಪ್ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಸ್ ಹಿಂದಕ್ಕೆ ಚಲಿಸಿದ್ದು, ರಸ್ತೆಯ ಕೆಳಗೆ ಇದ್ದ ಬಲ್ಬೀರ್ ಎನ್ನುವವರ ಮನೆಯ ಛಾವಣಿಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಮತ್ತು ಬಸ್ನಲ್ಲಿದ್ದ ಇನ್ನೊಂದು ಬಸ್ ಚಾಲಕ ಗಾಯಗೊಂಡಿದ್ದಾರೆ.
ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾತ್ರಾರ್ಥಿಗಳೆಲ್ಲ ಒಡಿಶಾದವರು. ಕೆಲವರು ಉಪಹಾರಕ್ಕಾಗಿ ಬಸ್ನಿಂದ ಕೆಳಕ್ಕೆ ಇಳಿದಿದ್ದರು. ಬಸ್ನಲ್ಲಿ ಒಟ್ಟು 24 ಮಂದಿ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದರು. ಗಂಗೋತ್ರಿ–ಯಮುನೋತ್ರಿ ಬಳಿಕ ಬಸ್ ಕೇದರನಾಥಕ್ಕೆ ತೆರಳುತ್ತಿತ್ತು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.