ಪಿಥೋರಗಢ್(ಉತ್ತರಾಖಂಡ): ಕಾಳಿ ನದಿಯ ಮೂಲ ಕಾಲಾಪಾನಿ ಎನ್ನುವುದಕ್ಕೆ ಸಾಕ್ಷಿಯಾಗಿ ಇರುವ ಶಾಸನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ಗ್ರಂಥಗಳನ್ನು ಉತ್ತರಾಖಂಡ ವಿದ್ವಾಂಸರು ಮುಂದಿಟ್ಟಿದ್ದಾರೆ.
ಕಾಲಾಪಾನಿ, ಲಿಪುಲೇಖ್, ಲಿಂಪಿಯಧುರ ಒಳಗೊಂಡಪರಿಷ್ಕೃತ ಭೂಪಟಕ್ಕೆ ನೇಪಾಳದ ಸಂಸತ್ತಿನ ಕೆಳಮನೆ ಶನಿವಾರ ಒಪ್ಪಿಗೆ ಸೂಚಿಸಿತ್ತು. ಆದರೆ ಈ ನಡೆಯನ್ನು ವಿರೋಧಿಸಿದ್ದ ಭಾರತ ಈ ಪ್ರದೇಶಗಳು ಭಾರತಕ್ಕೆ ಸೇರಿದವು ಎಂದು ಪ್ರತಿಕ್ರಿಯೆ ನೀಡಿತ್ತು. ಎರಡೂ ದೇಶಗಳಿಗೆ ಗಡಿಯಾಗಿ ಕಾಳಿ ನದಿಯಿದ್ದು, ಇದರ ಮೂಲ ಕಾಲಾಪಾನಿ ಪ್ರದೇಶವಲ್ಲ ಎಂದು ನೇಪಾಳ ವಾದಿಸಿತ್ತು. ಲಿಂಪಿಯಧುರದಲ್ಲಿ ಹುಟ್ಟುವ ಕುತಿ–ಯಾಂಗ್ತಿ ತೊರೆಯೇ ಕಾಳಿ ನದಿಯ ಮೂಲ ಎಂದು ನೇಪಾಳ ಹೇಳುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್.ಎಸ್.ಜೀನಾ ಕ್ಯಾಂಪಸ್ನ ಇತಿಹಾಸ ಪ್ರಾಧ್ಯಾಪಕರಾದ ವಿ.ಡಿ.ಎಸ್.ನೇಗಿ, ಕಾಳಿ ನದಿಯ ಉಲ್ಲೇಖವಿರುವ ಸ್ಕಂದ ಪುರಾಣದ ಮಾನಸ ಖಂಡವನ್ನು ಸಾಕ್ಷಿಯಾಗಿ ಮುಂದಿಟ್ಟಿದ್ದಾರೆ. ‘ಮಾನಸ ಖಂಡದಲ್ಲಿರುವ ಶ್ಲೋಕವೊಂದರ ಪ್ರಕಾರ ಕಾಳಿ ನದಿಯ ಮೂಲ ಲಿಪುಲೇಖ್ ಪರ್ವತಶ್ರೇಣಿ. ಭಾರತದ ಸ್ವಾತಂತ್ರ್ಯಕ್ಕೆ ಮೊದಲು ಟಿಬೆಟ್ಗೆ ಭೇಟಿ ನೀಡಿದ್ದ ಬ್ರಿಟಿಷ್ ಪ್ರವಾಸಿಗರು ಹಾಗೂ ಕೈಲಾಸ–ಮಾನಸಸರೋವರದ ಬಗ್ಗೆ ಬರೆದಿರುವ ಭಾರತದ ವಿದ್ವಾಂಸರು ಕಾಳಿ ನದಿಯ ಮೂಲ ಕಾಲಾಪಾನಿ ಎಂದು ಉಲ್ಲೇಖಿಸಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.