ಪುಣೆ: ಲಸಿಕೆ ರಫ್ತು ಮೇಲಿನ ನಿರ್ಬಂಧದ ನಿರ್ಧಾರವು ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ಕ್ರಮ ಎಂದಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಅಧ್ಯಕ್ಷ ಸೈರಸ್ ಪೂನಾವಾಲ, ಇದು ತಮ್ಮ ಸಂಸ್ಥೆಯನ್ನು ಕಠಿಣ ಪರಿಸ್ಥಿತಿಗೆ ದೂಡಿದೆ ಎಂದು ಅಸಮಾಧನಾ ವ್ಯಕ್ತಪಡಿಸಿದ್ದಾರೆ.
‘ಈ ವಿಷಯದ ಬಗ್ಗೆ ಮಾತನಾಡದಂತೆ ನನ್ನ ಮಗ (ಐಎಸ್ಐಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ನನ್ನ ಬಳಿ ಮನವಿ ಮಾಡಿಕೊಂಡಿದ್ದಾನೆ,’ ಎಂದೂ ಸೈರಸ್ ಪೂನಾವಾಲ ಹೇಳಿದ್ದಾರೆ.
ಪುಣೆಯಲ್ಲಿ ‘ಲೋಕಮಾನ್ಯ ತಿಲಕ್ ಪ್ರಶಸ್ತಿ’ ಸ್ವೀಕರಿಸಿದ ಸೈರಸ್ ಪೂನಾವಾಲ, ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಲಸಿಕೆ ರಫ್ತು ನಿಷೇಧ ಮೋದಿ ಸರ್ಕಾರದ ಅತ್ಯಂತ ಕೆಟ್ಟ ನಡೆ. ಈ ಬಗ್ಗೆ ನಾನು ಬಾಯಿ ತೆರೆಯಬಾರದೆಂದು ಎಂದು ನನ್ನ ಮಗ ಕೇಳಿಕೊಂಡಿದ್ದಾನೆ. ಆದರೆ ರಫ್ತಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ,’ ಎಂದು ಸೈರಸ್ ಪೂನಾವಾಲ ಹೇಳಿದ್ದಾರೆ.
150 ಕ್ಕೂ ಹೆಚ್ಚು ದೇಶಗಳು ಲಸಿಕೆಗಳಿಗಾಗಿ ಎಸ್ಐಐ ಅನ್ನು ಅವಲಂಬಿಸಿವೆ. ನಿರ್ಣಾಯಕ ಅವಧಿಯಲ್ಲಿ ಪೂರೈಕೆಯನ್ನು ನಿಲ್ಲಿಸಿದ್ದಕ್ಕಾಗಿ ಕಂಪನಿಯನ್ನು ದೂಷಿಸಲಾಗುತ್ತಿದೆ. ಸಂಸ್ಥೆಯನ್ನು ನಂಬಿ ದೇಶಗಳು ಕಂಪನಿಗೆ ಕೋಟ್ಯಂತರ ಮೊತ್ತವನ್ನು ಮುಂಗಡವಾಗಿ ಪಾವತಿಸಿವೆ. ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್’ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ₹5,000 ಕೋಟಿ ನೀಡಿವೆ ಎಂದು ಅವರು ಇದೇ ವೇಳೆ ಬಹಿರಂಗಪಡಿಸಿದರು.
ಗೇಟ್ಸ್ ಫೌಂಡೇಶನ್ ಮತ್ತು ಡಬ್ಲ್ಯುಎಚ್ಒಗೆ ಹಣ ಹಿಂದಿರುಗಿಸಲು ನಾನು ಮುಂದಾಗಿದ್ದೆ. ಆದರೆ ಭಾರತ ಸರ್ಕಾರವು ರಫ್ತು ನಿಷೇಧವನ್ನು ಶೀಘ್ರವೇ ತೆರವು ಮಾಡುತ್ತದೆ ಎಂಬ ಭರವಸೆಯಲ್ಲಿ ಅವರು ನನ್ನ ಕೋರಿಕೆಯನ್ನು ನಿರಾಕರಿಸಿದರು ಎಂದು ಅವರು ಹೇಳಿದರು.
ಕೋವಿಡ್ ಎರಡನೇ ಅಲೆಯು ಉತ್ತುಂಗಕ್ಕೇರಲು ಪ್ರಾರಂಭಿಸಿದಾಗ ಏಪ್ರಿಲ್ನಲ್ಲಿ ಭಾರತವು ಲಸಿಕೆ ರಫ್ತು ನಿಷೇಧಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.