ಭೋಪಾಲ್: ಮಧ್ಯಪ್ರದೇಶ ಸರ್ಕಾರಿ ನೌಕರರು ವಂದೇ ಮಾತರಂ ಹಾಡುವ ಅಗತ್ಯ ಇಲ್ಲ. ವಾದ್ಯ ಸಂಗೀತದಲ್ಲಿ ಈ ಗೀತೆಯನ್ನು ಪ್ರಸ್ತುತಪಡಿಸಲಾಗುತ್ತಿದ್ದು, ನೌಕರರು ಈ ಸಂದರ್ಭದಲ್ಲಿಯೇ ಗೌರವ ಸೂಚಿಸಬಹುದು.
ವಂದೇ ಮಾತರಂ ಹಾಡುವುದನ್ನು ನೂತನ ಸರ್ಕಾರ ರದ್ದುಗೊಳಿಸಿದ ಬೆನ್ನಲ್ಲೇ ಉಂಟಾಗಿದ್ದ ವಿವಾದಕ್ಕೆ ಮುಖ್ಯಮಂತ್ರಿ ಕಮಲ್ನಾಥ್ ಕಂಡುಕೊಂಡ ಪರಿಹಾರ ಸೂತ್ರ ಇದು.
ಪ್ರತಿ ತಿಂಗಳ ಮೊದಲನೇ ದಿನ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸುವ ಜೊತೆಗೇ ವಂದೇ ಮಾತರಂ ಅನ್ನೂ ನುಡಿಸುವುದು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರೊಂದಿಗೆ ಸಾರ್ವಜನಿಕರು ಸಹ ಈ ಗೌರವ ವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
ಕಳೆದ 14 ವರ್ಷಗಳಿಂದ ತಿಂಗಳ ಮೊದಲ ದಿನ ಸರ್ಕಾರಿ ನೌಕರರು ವಂದೇ ಮಾತರಂ ಅನ್ನು ಸಚಿವಾಲಯದ ಮುಂದೆ ಹಾಡುತ್ತಿದ್ದರು.ಆದರೆ, ಈ ಬಾರಿ ನಡೆದ ಚುನಾವಣೆಯಲ್ಲಿ ಗೆದ್ದು ಬಂದು ಸರ್ಕಾರ ರಚಿಸಿದ ಕಾಂಗ್ರೆಸ್, ವಂದೇ ಮಾತರಂ ಹಾಡುವ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿತು. ಈ ಕ್ರಮದಿಂದ ವ್ಯಗ್ರಗೊಂಡ ಬಿಜೆಪಿ ಪಾಳೆಯ, ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿತಲ್ಲದೇ, ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.