ಛತ್ರಪತಿ ಸಾಂಭಾಜಿನಗರ(ಮಹಾರಾಷ್ಟ್ರ): ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕು ಎಂದು ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಹೇಳಿದ್ದಾರೆ.
‘ಜನ ಗಣ ಮನವನ್ನು ರವೀಂದ್ರನಾಥ್ ಟ್ಯಾಗೋರ್ ಬೆಂಗಾಲಿಯಲ್ಲಿ ರಚಿಸಿದ್ದರು. ಅದರ ಹಿಂದಿ ಅವತರಣಿಕೆಯನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳುವ ನಿರ್ಧಾರವನ್ನು 1950ರ ಜನವರಿ 24ರಂದು ನಡೆದ ಸಂವಿಧಾನ ರಚನಾ ಸಮಿತಿ ಸಭೆಯು ನಿರ್ಧಾರ ಕೈಗೊಂಡಿತ್ತು.
‘ಈ ಗೀತೆಯನ್ನು 1911ರಲ್ಲಿ ಕೋಲ್ಕತ್ತದಲ್ಲಿ ರವೀಂದ್ರನಾಥ್ ಟ್ಯಾಗೋರ್ ಹಾಡಿದ್ದರು. ಆ ಸಮಯದಲ್ಲಿ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಭಾರತದಲ್ಲಿ ಅನ್ಯಾಯ ಎಸಗುತ್ತಿದ್ದ ಬ್ರಿಟಿಷ್ ದೊರೆ ಜಾರ್ಜ್. ವಿ ಎದುರು ಟ್ಯಾಗೋರ್ ಈ ಗೀತೆಯನ್ನು ಹಾಡಿದ್ದರು. ದೇಶವನ್ನು ಪ್ರತಿನಿಧಿಸಲು ಈ ಗೀತೆಯನ್ನು ಹಾಡಿರಲಿಲ್ಲ’ಎಂದು ರಾಮಗಿರಿ ಮಹಾರಾಜ್ ಹೇಳಿದ್ದಾರೆ.
‘ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿ ಘೋಷಿಸಲು ನಾವು ಹೋರಾಟ ಸಂಘಟಿಸಬೇಕಿದೆ. ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಲೇಬೇಕು’ಎಂದಿದ್ದಾರೆ.
ಬಳಿಕ, ವಿವಾದಾತ್ಮಕ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಾರಾಜ್, ಇದು ಗೌರವ ಅಥವಾ ಅಗೌರವದ ವಿಚಾರವಲ್ಲ. ಸತ್ಯ ಹೇಳುವುದಾಗಿದೆ ಎಂದಿದ್ದಾರೆ.
‘ಸತ್ಯ ಹೇಳುವುದೇ ಅಗೌರವ ಎನ್ನುವುದಾದರೆ, ಅತ್ಯಂತ ದುರದೃಷ್ಟಕರ’ಎಂದಿದ್ದಾರೆ.
‘ಮಿಷನ್ ಅಯೋಧ್ಯ’ಚಿತ್ರದ ಟ್ರೇಲರ್ ಬಿಡುಗಡೆಗಾಗಿ ರಾಮಗಿರಿ ಮಹಾರಾಜ್ ಇಲ್ಲಿಗೆ ಆಗಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.