ನಾಮಪತ್ರ ಸಲ್ಲಿಸಿದ ಸಿ.ಪಿ ರಾಧಾಕೃಷ್ಣನ್
ನವದೆಹಲಿ: ಎನ್ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ನಾಯಕರು ಈ ವೇಳೆ ಇದ್ದರು.
ಉಪರಾಷ್ಟ್ರಪತಿ ಚುನಾವಣೆಯ ಚುನಾವಣಾಧಿಕಾರಿಯೂ ಆಗಿರುವ ರಾಜ್ಯಸಭಾ ಕಾರ್ಯದರ್ಶಿ ಪಿ.ಸಿ ಮೋದಿಯವರಿಗೆ ರಾಧಾಕೃಷ್ಣನ್ ನಾಲ್ಕು ಸೆಟ್ಗಳ ನಾಮಪತ್ರವನ್ನು ಹಸ್ತಾಂತರಿಸಿದರು. ಅವರಿಗೆ ಮೋದಿ ಸಹಿತ ಇತರ ನಾಯಕರು ಸಾಥ್ ನೀಡಿದರು.
ನಾಲ್ಕು ಸೆಟ್ಗಳ ನಾಮಪತ್ರಕ್ಕೆ ನರೇಂದ್ರ ಮೋದಿ, ರಾಜನಾಥ ಸಿಂಗ್, ಅಮಿತ್ ಶಾ ಹಾಗೂ ಜೆಡಿಯು ನಾಯಕ ರಾಜೀವ್ ರಂಜ್ ಸಿಂಗ್ ಅನುಮೋದಕರಾಗಿ ಸಹಿ ಹಾಕಿದ್ದಾರೆ.
ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ರಾಧಾಕೃಷ್ಣನ್ ಅವರಿಂದ ಸಹಿ ಪಡೆದುಕೊಂಡರು. ಬಳಿಕ ಪ್ರಧಾನಿ ಮೋದಿಯವರಿಗೆ ಸ್ವೀಕೃತಿ ಪತ್ರವನ್ನು ನೀಡಿದರು.
ಮೋದಿ, ಶಾ, ಸಚಿವರಾದ ಪ್ರಲ್ಹಾದ ಜೋಶಿ, ಧರ್ಮೇಂದ್ರ ಪ್ರಧಾನ್ ಮತ್ತು ಟಿಡಿಪಿ ನಾಯಕ ಮತ್ತು ಕೇಂದ್ರ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ, ಎಲ್ಜೆಎಸ್ಪಿ (ಆರ್ವಿ) ನಾಯಕ ಚಿರಾಗ್ ಪಾಸ್ವಾನ್, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಇತರ ಎನ್ಡಿಎ ನಾಯಕರು ರಾಧಾಕೃಷ್ಣನ್ ಅವರನ್ನು ಸಂಸತ್ತಿನ ಚುನಾವಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋದರು.
ಇದಕ್ಕೂ ಮೊದಲು, ರಾಧಾಕೃಷ್ಣನ್ ಸಂಸತ್ ಸಂಕೀರ್ಣದಲ್ಲಿರುವ ಪ್ರೇರಣಾ ಸ್ಥಳದಲ್ಲಿರುವ ಮಹಾತ್ಮ ಗಾಂಧಿ ಮತ್ತು ಇತರ ರಾಷ್ಟ್ರೀಯ ನಾಯಕರಿಗೆ ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.