ADVERTISEMENT

ಭಯೋತ್ಪಾದನೆ ಸಂತ್ರಸ್ತರು ಭಯೋತ್ಪಾದಕರ ಜೊತೆ ಕುಳಿತುಕೊಳ್ಳಲ್ಲ: ಬಿಲಾವಲ್‌ಗೆ ಜೈಶಂಕರ್

ಪಿಟಿಐ
Published 5 ಮೇ 2023, 16:43 IST
Last Updated 5 ಮೇ 2023, 16:43 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ಬೆನೊಲಿಂ (ಗೋವಾ): ‘ಭಯೋತ್ಪಾದನೆಯ ಸಂತ್ರಸ್ತರು ಎಂದು ಹೇಳಿಕೊಳ್ಳುವವರು ಭಯೋತ್ಪಾದನೆಯಲ್ಲಿ ತೊಡಗಿರುವವ ಜೊತೆ ಕುಳಿತುಕೊಳ್ಳುವುದಿಲ್ಲ. ಅವರೊಂದಿಗೆ ಉಗ್ರವಾದದ ಬಗ್ಗೆ ಚರ್ಚೆ ನಡೆಸುವುದಿಲ್ಲ’ ಎನ್ನುವ ಮೂಲಕ ಸಚಿವ ಎಸ್‌.ಜೈಶಂಕರ್‌ ಅವರು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ವಿದೇಶಾಂಗ ಸಚಿವರ ಸಮಾವೇಶದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಭಯೋತ್ಪಾದನೆ ವಿರುದ್ಧ ಹೋರಾಟ ಕೈಗೊಳ್ಳುವುದಕ್ಕೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಕುರಿತ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

ADVERTISEMENT

‘ಉಗ್ರವಾದ ಒಡುತ್ತಿರುವ ಅಪಾಯ ಕುರಿತು ಭಯೋತ್ಪಾದನೆಗೆ ಉತ್ತೇಜನ, ಸಮರ್ಥನೆ ಮಾಡುವ ಹಾಗೂ ಅದರ ವಕ್ತಾರನಾಗಿರುವ ವ್ಯಕ್ತಿಯ ನಿಲುವಿನ ಬಗ್ಗೆ ಎಸ್‌ಸಿಒ ಸಮಾವೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದರು.

‘ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರವೊಂದರ ವಿದೇಶಾಂಗ ಸಚಿವರಾಗಿ ಭುಟ್ಟೊ ಭಾರತಕ್ಕೆ ಬಂದಿದ್ದು, ಇಂತಹ ನಡೆಗಳು ಬಹುಪಕ್ಷೀಯ ರಾಜತಾಂತ್ರಿಕತೆಯ ಭಾಗಗಳಾಗಿವೆ. ಅವರ ಭೇಟಿ ಕುರಿತು ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇಲ್ಲ’ ಎಂದೂ ಹೇಳಿದರು.

‘ಸೇನೆ ಹಿಂತೆಗೆತ ಪೂರ್ಣವಾಗಬೇಕು’: ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿದಾಗ ಮಾತ್ರ ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ಸಹಜಸ್ಥಿತಿಗೆ ಬರಲು ಸಾಧ್ಯ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದರು.

ಎಸ್‌ಸಿಒ ಸಮಾವೇಶಕ್ಕೂ ಮುನ್ನ ಚೀನಾ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಗಡಿಯಲ್ಲಿ ಸಹಜ ಸ್ಥಿತಿ ಇಲ್ಲ. ಈ ಬಗ್ಗೆ ನಾವು ಮುಕ್ತವಾಗಿ ಚರ್ಚೆ ನಡೆಸಿದ್ದೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕು ಎಂದರೆ, ಗಡಿಯಲ್ಲಿನ ಸೈನಿಕರನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿಯಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.