ಕರೂರು ಕಾಲ್ತುಳಿತ ಹಾಗೂ ನಟ ವಿಜಯ್
–ಪಿಟಿಐ ಚಿತ್ರ
ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗೆ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಇಂದು (ಸೋಮವಾರ) ಭಾಗಿಯಾಗಿದ್ದು, ಸತತ 6 ಗಂಟೆಗಳ ಕಾಲ ಸಿಬಿಐ ವಿಚಾರಣೆಗೆ ಒಳಗಾಗಿದ್ದಾರೆ.
ಜನವರಿ 12ರಂದು ವಿಚಾರಣೆಗೆ ಹಾಜರಾಗಿದ್ದ ವಿಜಯ್ ಅವರಿಗೆ ಮರು ದಿನವೂ (ಜ.13ರಂದು) ವಿಚಾರಣೆಗೆ ಬರುವಂತೆ ಸಿಬಿಐ ನಿರ್ದೇಶನ ನೀಡಿತ್ತು. ಆದರೆ ಪೊಂಗಲ್ ಕಾರಣ ನೀಡಿ ಬೇರೆ ದಿನ ಹಾಜರಾಗಲು ನಟ ಮನವಿ ಮಾಡಿದ್ದರು.
ರ್ಯಾಲಿಗೆ ಸಂಬಂಧಿಸಿದ ಪ್ರಶ್ನೆಗಳು, ಸಭೆ ವಿಳಂಬಕ್ಕೆ ಕಾರಣಗಳು, ಕಾಲ್ತುಳಿತ ಸಂಭವಿಸಿದ್ದರೂ ಭಾಷಣ ಮುಂದುವರಿಸಿದ್ದು ಏಕೆ? ಎಂಬುದೂ ಸೇರಿದಂತೆ ಅನೇಕ ಪ್ರಶ್ನೆಗಳನ್ನು ವಿಜಯ್ ಅವರಿಗೆ ಕೇಳಲಾಗಿದೆ ಎಂದು ಟಿವಿಕೆ ಪಕ್ಷದ ನಾಯಕ ಸಿ.ಟಿ. ನಿರ್ಮಲ್ ಕುಮಾರ್ ತಿಳಿಸಿದ್ದಾರೆ.
ವಿಜಯ್ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ. ಯಾವುದು ನಿಜ ಎಂಬುದು ಎಲ್ಲರಿಗೂ ತಿಳಿದಿದೆ. ವಿಜಯ್ ಅವರನ್ನು ಮತ್ತೆ ವಿಚಾರಣೆಗೆ ಕರೆದಿಲ್ಲ. ಈ ಬಗ್ಗೆ ಯಾವುದೇ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ನಿರ್ಮಲ್ ಕುಮಾರ್ ಹೇಳಿದ್ದಾರೆ.
ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಕರೂರಿನಲ್ಲಿ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ದೆಹಲಿಯ ಸಂಸದರು ಕರೂರಿಗೆ ಹೋಗಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷರು ಸಹ ಕರೂರಿನಲ್ಲಿ ನಿಖರವಾಗಿ ಏನಾಯಿತು ಎಂದು ಹೇಳಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.