ADVERTISEMENT

ಮಲ್ಯ, ಚೋಕ್ಸಿ, ನೀರವ್ ಮೋದಿಯನ್ನು ದೇಶದ ಕಾನೂನಿನ ಮುಂದೆ ತರುತ್ತೇವೆ: ನಿರ್ಮಲಾ

ಪಿಟಿಐ
Published 19 ಮಾರ್ಚ್ 2021, 1:34 IST
Last Updated 19 ಮಾರ್ಚ್ 2021, 1:34 IST
ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್: ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್: ಪಿಟಿಐ ಚಿತ್ರ   

ರಾಜ್ಯಸಭೆ: ದೇಶಬಿಟ್ಟು ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಕಾನೂನನ್ನು ಎದುರಿಸಲು ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

ವಿಜಯ್ ಮಲ್ಯ ಮತ್ತು ನೀರವ್ ಮೋದಿಯನ್ನು ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಚೋಕ್ಸಿ ಆಂಟಿಗುವಾದಲ್ಲಿದ್ದಾರೆ ಎಂದು ನಂಬಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಎಲ್ಲರೂ ಹಣಕಾಸು ವಂಚನೆ ಆರೋಪಗಳ ಕುರಿತಂತೆ ದೇಶದ ಕಾನೂನನ್ನು ಎದುರಿಸಲು ಹಿಂತಿರುಗಲಿದ್ದಾರೆ ಎಂದು ರಾಜ್ಯಸಭೆಯಲ್ಲಿ ವಿಮಾ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ವೇಳೆ ಉತ್ತರಿಸುವಾಗ ನಿರ್ಮಲಾ ಸೀತಾರಾಮನ್ ಹೇಳಿದರು.

ADVERTISEMENT

ತನ್ನ ನಿಷ್ಕ್ರಿಯ ಕಿಂಗ್‌ಫಿಶರ್ ಏರ್‌ಲೈನ್ಸ್ ಪಡೆದಿದ್ದ ₹ 9,000 ಕೋಟಿ ಬ್ಯಾಂಕ್ ಸಾಲದ ಸುಸ್ತಿದಾರರಾಗಿರುವ ಆರೋಪಿ ವಿಜಯ್ ಮಲ್ಯ 2016 ರ ಮಾರ್ಚ್‌ನಿಂದ ಬ್ರಿಟನ್ನಿನಲ್ಲಿದ್ದಾರೆ.

ನೀರವ್ ಮೋದಿ ಮತ್ತು ಅವರ ಮಾವ ಚೋಕ್ಸಿ ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಮಾಡಿದ ಆರೋಪ ಕೇಳಿ ಬಂದ ಬಳಿಕ ದೇಶಬಿಟ್ಟು ಪರಾರಿಯಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನೀರವ್ ಮೋದಿ ಸುಮಾರು ₹ 14,500 ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.