ತಿರುವನಂತಪುರ: ಮದುವೆಯ ಸಂಭ್ರಮದಲ್ಲಿರುವ ವಧು–ವರರು ತಮ್ಮ ಅವಿಸ್ಮರಣೀಯ ಕ್ಷಣವನ್ನು ಫೋಟೊಶೂಟ್ ಮೂಲಕ ಸೆರೆಹಿಡಿಯುವುದು ಸಾಮಾನ್ಯ. ಆದರೆ, ಕೇರಳದ ವಧುವೊಬ್ಬರು ತಮ್ಮಮದುವೆಯ ಫೋಟೊಶೂಟ್ ಅನ್ನು ಆ ಪ್ರದೇಶದಲ್ಲಿನ ರಸ್ತೆ ಗುಂಡಿಗಳ ಬಳಿಮಾಡಿಸಿಕೊಳ್ಳುವ ಮೂಲಕ ಸಮಸ್ಯೆಯ ಬಗ್ಗೆ ಆಡಳಿತ ವರ್ಗದ ಗಮನ ಸೆಳೆದಿದ್ದಾರೆ.
ರಸ್ತೆಯಲ್ಲಿರುವ ಗುಂಡಿಗಳ ಬಳಿ ನಿಂತು ವಧು ಫೋಟೊಶೂಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಂಪು ಸೀರೆಯುಟ್ಟ ವಧು ನೀರು ತುಂಬಿದ ರಸ್ತೆ ಗುಂಡಿಗಳ ಪಕ್ಕದಲ್ಲಿ ನಡೆಯುತ್ತಾ ಬರುತ್ತಿದ್ದಾರೆ. ಛಾಯಾಗ್ರಾಹಕರು ಗುಂಡಿಗಳನ್ನೂ ಹೈಲೆಟ್ ಮಾಡಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅಕ್ಕಪಕ್ಕ ಹೋಗುತ್ತಿದ್ದ ವಾಹನ ಸವಾರರು ಸಹ ಪರದಾಡುತ್ತಾ ಸಂಚರಿಸುತ್ತಿರುವುದು ಕಂಡುಬಂದಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ 43 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, 3.7 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ವಧುವಿನ ಸೃಜನಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿದ್ದಾರೆ. ಒಬ್ಬ ಬಳಕೆದಾರ ‘ಈ ಫೋಟೊಶೂಟ್ ರಸ್ತೆಯಲ್ಲಿ ಅಲ್ಲ ಕೊಳದಲ್ಲಿ ನಡೆಯುತ್ತಿದೆ’ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಒಳ್ಳೆ ರಸ್ತೆ’ಎಂದು ಬರೆದಿದ್ಧಾರೆ. ಮಗದೊಬ್ಬರು, ‘ಇದು ರಸ್ತೆಯೇ? ನೀವು ಮೀನಿನ ಮರಿಗಳನ್ನು ಖರೀದಿಸಿದರೆ, ಇಲ್ಲಿ ಮೀನು ಸಾಕಾಣಿಕೆಯನ್ನು ಪ್ರಾರಂಭಿಸಬಹುದು’ಎಂದು ಕಾಮೆಂಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.