ADVERTISEMENT

ರೈಲು ದುರಂತ: ಕೋರೊಮಂಡಲ್ ಎಕ್ಸ್‌ಪ್ರೆಸ್ ಚಾಲಕನಿಗೆ ಕ್ಲೀನ್‌ಚಿಟ್

ರೈಲಿಗೆ ಗ್ರೀನ್ ಸಿಗ್ನಲ್ ದೊರಕಿತ್ತು, ಅತಿ ವೇಗದಲ್ಲಿರಲಿಲ್ಲ: ಹಿರಿಯ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 14:54 IST
Last Updated 4 ಜೂನ್ 2023, 14:54 IST
   

ನವದೆಹಲಿ: ‘ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ಅತಿ ವೇಗದಲ್ಲಿ ಚಲಿಸುತ್ತಿರಲಿಲ್ಲ. ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್‌ ಪ್ರವೇಶಿಸಲು ಹಸಿರು ನಿಶಾನೆ ದೊರಕಿತ್ತು. ಅಪಘಾತದ ಹಿಂದೆ ಚಾಲಕನ ಪಾತ್ರ ಇಲ್ಲ’ ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ.

ರೈಲ್ವೆ ಮಂಡಳಿಯ ಇಬ್ಬರು ಪ್ರಮುಖ ಅಧಿಕಾರಿಗಳಾದ ಸಿಗ್ನಲಿಂಗ್‌ನ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಸಂದೀಪ್ ಮಾಥುರ್ ಹಾಗೂ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯವರ್ಮ ಸಿನ್ಹಾ ಅವರು ಅಪಘಾತ ಹೇಗೆ ಸಂಭವಿಸಿರಬಹುದು ಎಂಬುದನ್ನು ವಿವರಿಸಿದ್ದಾರೆ.

ಅಪಘಾತಕ್ಕೆ ಕಾರಣವಾದ ಸಮಸ್ಯೆಯ ಭಾಗವೆಂದು ಮೇಲ್ನೋಟಕ್ಕೆ ಕಂಡುಬರುವ ಇಂಟರ್‌ಲಾಕಿಂಗ್ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅವರು ವಿವರಿಸಿದರು.

ADVERTISEMENT

‘ಕೋರೊಮಂಡಲ್‌ ಎಕ್ಸ್‌ಪ್ರೆಸ್‌ 128 ಕಿ.ಮೀ ವೇಗದಲ್ಲಿತ್ತು‌. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್ 126 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಎರಡೂ ರೈಲುಗಳ‌ಲ್ಲಿ ಅತಿಯಾದ ವೇಗದ ಪ್ರಶ್ನೆಯೇ ಇರಲಿಲ್ಲ. ಸಿಗ್ನಲಿಂಗ್ ಸಮಸ್ಯೆ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಸಿನ್ಹಾ ಹೇಳಿದರು.

‘ಕೋರೊಮಂಡಲ್ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಅದರ ಬೋಗಿಗಳು ಹಳಿ ತಪ್ಪಿ ಮತ್ತೊಂದು ಹಳಿ ಮೇಲೆ ಬಿದ್ದಿದೆ’  ಎಂದು ಅವರು ಹೇಳಿದರು.

ಗೂಡ್ಸ್ ರೈಲು ನಿಲ್ಲಿಸಿದ್ದ ನಿಲ್ದಾಣದಲ್ಲಿ ಕೋರೊಮಂಡಲ್ ಎಕ್ಸ್‌ಪ‍್ರೆಸ್ ಲೂಪ್ ಲೈನ್‌ ಪ್ರವೇಶಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.