ADVERTISEMENT

ಐದು ವಿಧಾನಸಭೆಗಳಿಗೆ ಚುನಾವಣೆ: ಬಂಗಾಳದಲ್ಲಿ ಘರ್ಷಣೆ; ಉಳಿದೆಡೆ ಶಾಂತ

ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದ ಮತದಾನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:08 IST
Last Updated 6 ಏಪ್ರಿಲ್ 2021, 21:08 IST
ಕೋವಿಡ್ ದೃಢಪಟ್ಟಿರುವ ಡಿಎಂಕೆ ನಾಯಕಿ ಕನಿಮೊಳಿ ಅವರು ಪಿಪಿಇ ಕಿಟ್ ಧರಿಸಿ ಮಂಗಳವಾರ ಮತದಾನ ಮಾಡಿದರು–ಪಿಟಿಐ ಚಿತ್ರ
ಕೋವಿಡ್ ದೃಢಪಟ್ಟಿರುವ ಡಿಎಂಕೆ ನಾಯಕಿ ಕನಿಮೊಳಿ ಅವರು ಪಿಪಿಇ ಕಿಟ್ ಧರಿಸಿ ಮಂಗಳವಾರ ಮತದಾನ ಮಾಡಿದರು–ಪಿಟಿಐ ಚಿತ್ರ   

ನವದೆಹಲಿ: ಐದು ವಿಧಾನಸಭೆಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕೆಲವು ಘಟನೆಗಳನ್ನು ಹೊರತುಪಡಿಸಿದರೆ, ಮತದಾನ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.

ಸಂಜೆ 6 ಗಂಟೆವರೆಗಿನ ಮಾಹಿತಿ ಪ್ರಕಾರ, ಅಸ್ಸಾಂ ಶೇ 82.33, ಕೇರಳ ಶೇ 75, ಪುದುಚೇರಿ ಶೇ 81.55, ತಮಿಳುನಾಡು ಶೇ 72, ಪಶ್ಚಿಮ ಬಂಗಾಳದಲ್ಲಿ ಶೇ 77.68 ಮತದಾನವಾಗಿದೆ.

ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಐದೂ ವಿಧಾನಸಭೆಯ 475 ಅಭ್ಯರ್ಥಿಗಳ ಭವಿಷ್ಯವು ಮತಪೆಟ್ಟಿಗೆ ಸೇರಿತು.

ADVERTISEMENT

ಅಸ್ಸಾಂ, ಕೇರಳ ಶಾಂತಿಯುತ ಅಸ್ಸಾಂನಲ್ಲಿ 126 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿತ್ತು. 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೆಲವು ಸಣ್ಣಪುಟ್ಟ ಹಿಂಸಾಚಾರ ಘಟನೆಗಳನ್ನು ಹೊರತುಪಡಿಸಿದರೆ ಕೇರಳದಲ್ಲೂ ಮತದಾನ ಶಾಂತಿಯುತವಾಗಿತ್ತು.

ಪತ್ತನಂತಿಟ್ಟದ ಆರನ್ಮುಳ ಹಾಗೂ ಕೋಟಯಂ ಜಿಲ್ಲೆಯ ಚವಿಟ್ಟುವಾರಿಯಲ್ಲಿ ಸರತಿಯಲ್ಲಿ ನಿಂತಿದ್ದ ಮಹಿಳೆ ಸೇರಿದಂತೆ ಇಬ್ಬರು ಮತದಾರರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ತಿರುವನಂತಪುರ ಜಿಲ್ಲೆಯ ಮಾರ್ಕ್ಸ್‌ವಾದಿ ಪಕ್ಷದ ಭದ್ರಕೋಟೆಯಾದ ಕಾಟ್ಟಾಯಿಕೋಣಂ ಕ್ಷೇತ್ರದ ಕಳಕೂಟ್ಟಂನಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆಸಿದರು. ನಾಲ್ವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು, ಒಂದು ವಾಹನಕ್ಕೆ ಹಾನಿಯಾಗಿದೆ. ಮೂವರು ಸಿಪಿಎಂ ಕಾರ್ಯಕರ್ತರು ಹಾಗೂ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರ ಆಪ್ತ ಸಹಾಯಕನನ್ನು ವಶಕ್ಕೆ ಪಡೆಯಲಾಗಿದೆ.

ಸೀರೆ ಮೇಲೆ ಕಮಲದ ಚಿಹ್ನೆ: ದೂರು
ಮತ ಚಲಾಯಿಸುವಾಗ ಕಮಲದ ಚಿಹ್ನೆ ಇರುವಸೀರೆ ಧರಿಸಿದ್ದ ಕೊಯಮತ್ತೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವನತಿ ಶ್ರೀನಿವಾಸನ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.