ADVERTISEMENT

2006ರ ವಾರಾಣಸಿ ಸ್ಫೋಟ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:31 IST
Last Updated 6 ಜೂನ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: 2006ರ ಮಾರ್ಚ್‌ನಲ್ಲಿ ವಾರಾಣಸಿಯಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ವಲೀಯುಲ್ಲಾಗೆ (55) ಗಾಜಿಯಾಬಾದ್‌ ಜಿಲ್ಲಾ ನ್ಯಾಯಾಲಯ ಸೋಮವಾರ ಮರಣ ದಂಡನೆ ವಿಧಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಮತ್ತೊಂದು ಸೆಕ್ಷನ್‌ ಅಡಿ ಜೀವಾವಧಿ ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಿದೆ.

ವಾರಾಣಸಿಯ ಸಂಕಟ ಮೋಚನ ದೇವಾಲಯ ಮತ್ತು ದಂಡು ರೈಲು ನಿಲ್ದಾಣದಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ಸ್ಫೋಟದಲ್ಲಿ 28 ಜನರು ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಆರೋಪಿ ವಲೀಯುಲ್ಲಾ ಪ್ರಯಾಗ್‌ರಾಜ್‌ ಜಿಲ್ಲೆಯ ಫೂಲ್ಪುರ ನಿವಾಸಿ.ಘಟನೆ ಬಳಿಕ ಆರೋಪಿಯನ್ನು ಲಖನೌ ಬಳಿಯ ಗೋಸಾಯಿಗಂಜ್‌ನಿಂದ ಸೆರೆಹಿಡಿಯಲಾಗಿತ್ತು. ಐಪಿಸಿ ಸೆಕ್ಷನ್‌ 302 (ಕೊಲೆ), ಸೆಕ್ಷನ್‌ 307 (ಕೊಲೆಗೆ ಯತ್ನ) ಮತ್ತು ಸ್ಫೋಟಕಗಳ ಕಾಯ್ದೆ ಅಡಿ ಆತ ದೋಷಿ ಎಂದು ನ್ಯಾಯಾಲಯವು ಶನಿವಾರ ಹೇಳಿತ್ತು. ಸೆಕ್ಷನ್‌ 302ರ ಅಡಿ ಆತನಿಗೆ ಮರಣ ದಂಡನೆ ವಿಧಿಸಲಾಗಿದ್ದರೆ, ಸ್ಫೋಟಕಗಳ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ADVERTISEMENT

ಇತರ ಮೂವರು ಆರೋಪಿಗಳಾದ ಮುಸ್ತಕೀಮ್‌, ಬಶೀರ್‌ ಮತ್ತು ಝಕರಿಯಾ ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.