ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್ ಅವರ ಮೇಲೆ ತಮ್ಮ ಅಧಿಕೃತ ಕಚೇರಿಯಲ್ಲಿ ಹಲ್ಲೆ ನಡೆದಿದೆ ಎಂಬ ಪ್ರಕರಣದ ಕುರಿತು ನ್ಯಾಯಸಮ್ಮತವಾದ ತನಿಖೆ ನಡೆಸಬೇಕು ಮತ್ತು ನ್ಯಾಯ ಒದಗಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಈ ಪ್ರಕರಣದ ತನಿಖೆ ನಡೆಯುತ್ತಿದೆ, ಈಗ ಮಾತನಾಡಿದರೆ ಕಾನೂನು ಪ್ರಕ್ರಿಯೆ ಮೇಲೆ ಪರಿಣಾಮ ಉಂಟಾಗುತ್ತದೆ. ಆದರೆ ನಾನು ನಾಯಬದ್ಧ ತನಿಖೆ ನಡೆಯಲಿ ಎಂದು ಆಶಿಸುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೃಷ್ಟಿಕೋನಗಳಿವೆ. ಹೀಗಾಗಿ ಪೊಲೀಸರು ಎರಡೂ ದೃಷ್ಟಿಕೋನಗಳಲ್ಲೂ ತನಿಖೆ ನಡೆಸಬೇಕು' ಎಂದರು.
ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ತಮ್ಮನ್ನು ಮೇ 13ರಂದು ಥಳಿಸಿದ್ದರು ಎಂದು ಸ್ವಾತಿ ಆರೋಪಿಸಿದ್ದಾರೆ.
‘ಹೆಸರು ಕೆಡಿಸಲು ನಾಯಕರ ಮೇಲೆ ಒತ್ತಡ’
ತಮ್ಮ ಹೆಸರು ಕೆಡಿಸುವಂತೆ ಪಕ್ಷದ ಎಲ್ಲಾ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸ್ವಾತಿ ಅವರು ಬುಧವಾರ ಆರೋಪಿಸಿದ್ದಾರೆ. ‘ಪಕ್ಷದ ಪ್ರಮುಖ ನಾಯಕರೊಬ್ಬರಿಂದ ನನಗೆ ಕರೆ ಬಂದಿತ್ತು. ಸ್ವಾತಿ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾತನಾಡಬೇಕು ಎಂದು ಎಲ್ಲರಿಗೂ ಒತ್ತಡ ಹೇರಲಾಗುತ್ತಿದೆ. ಸ್ವಾತಿಯನ್ನು ಬೆಂಬಲಿಸಿದವರನ್ನು ಪಕ್ಷದಿಂದ ಉಚ್ಚಾಟಣೆ ಮಾಡಲಾಗುತ್ತದೆ ಎಂದೂ ಎಚ್ಚರಿಕೆ ನೀಡಲಾಗಿದೆ ಅವರು ನನಗೆ ಹೇಳಿದರು’ ಎಂದು ಸ್ವಾತಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಕೆಲವರಿಗೆ ಸುದ್ದಿಗೋಷ್ಠಿ ನಡೆಸುವ ಕೆಲಸ ನೀಡಲಾಗಿದೆ. ಇನ್ನೂ ಕೆಲವರಿಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಕೆಲಸ ವಹಿಸಲಾಗಿದೆ. ಕೆಲವರಿಗೆ ಅಮೆರಿಕದಲ್ಲಿರುವ ಎಎಪಿಯ ಕಾರ್ಯಕರ್ತರಿಗೆ ಕರೆ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡುವಂತೆ ನಿರ್ದೇಶಿಸುವ ಕೆಲಸ ನೀಡಲಾಗಿದೆ’ ಎಂದು ಅವರು ಮತ್ತೊಂದು ಪೋಸ್ಟ್ನಲ್ಲಿ ಹೇಳಿದ್ದಾರೆ. ಬಿಭವ್ ಮೊಬೈಲ್ನಲ್ಲಿರುವ ದತ್ತಾಂಶಗಳನ್ನು ಪರಿಶೀಲಿಸುವ ಸಲುವಾಗಿ ಅವರನ್ನು ಪೊಲೀಸರು ಮುಂಬೈಗೆ ಕರೆದೊಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.