ADVERTISEMENT

ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲವೊಂದು ಅಂಶಗಳಿಗೆ ಸುಪ್ರೀಂ ಕೋರ್ಟ್ ತಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2025, 6:28 IST
Last Updated 15 ಸೆಪ್ಟೆಂಬರ್ 2025, 6:28 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲವೊಂದು ಅಂಶಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ ಮನೀಶ್ ಅವರಿದ್ದ ಪೀಠ ಈ ಕೆಳಗಿನ ಅಂಶಗಳಿಗೆ ತಡೆ ನೀಡಿತು.

  • ಆಸ್ತಿಯನ್ನು ವಕ್ಫ್ ಮಾಡಬೇಕಿದ್ದರೆ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷಗಳಿಂದ ಅನುಸರಿಸುತ್ತಿರಬೇಕು ಎನ್ನುವ ಕಾಯ್ದೆಯ ಸೆಕ್ಷನ್ 3(1)(r).

    ADVERTISEMENT

ಒಬ್ಬ ವ್ಯಕ್ತಿಯು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಸ್ಲಾಂ ಧರ್ಮವನ್ನು ಆಚರಿಸುತ್ತಿದ್ದಾನೆಯೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುತ್ತವೆ. ಅಂತಹ ಕಾರ್ಯವಿಧಾನವಿಲ್ಲದೆ, ಈ ಅಂಶವು ಅಧಿಕಾರದ ಅನಿಯಂತ್ರಿತ ಬಳಕೆಗೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

  • ಆಸ್ತಿ ಅತಿಕ್ರಮಣವಾಗಿದೆಯೇ ಎಂದು ನಿಯೋಜಿತ ಅಧಿಕಾರಿ ವರದಿ ಸಲ್ಲಿಸುವವರೆಗೆ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗದು ಎನ್ನುವ ಸೆಕ್ಷನ್ 3C(2).

  • ಒಂದು ವೇಳೆ ಆಸ್ತಿಯು ಸರ್ಕಾರಿ ಜಮೀನು ಎನ್ನುವುದನ್ನು ನಿಯೋಜಿತ ಅಧಿಕಾರಿ ನಿರ್ಧರಿಸಿದರೆ, ಈ ಬಗ್ಗೆ ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎನ್ನುವ ಸೆಕ್ಷನ್ 3C(3).

  • ನಿಯೋಜಿತ ಅಧಿಕಾರಿ ಸಲ್ಲಿಸಿದ ವರದಿ ಆಧರಿಸಿ, ದಾಖಲೆಗಳಲ್ಲಿ ಅಗತ್ಯ ಬದಲಾವಣೆ ಮಾಡಬೇಕು ಎಂದು ವಕ್ಫ್ ಬೋರ್ಡ್‌ಗೆ ರಾಜ್ಯ ಸರ್ಕಾರ ಸೂಚಿಸಬೇಕು ಎನ್ನುವ ಸೆಕ್ಷನ್ 3C(4).

ಹಕ್ಕುಗಳನ್ನು ನಿರ್ಧರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದು ಅಧಿಕಾರ ಪ್ರತ್ಯೇಕಿಕರಣಕ್ಕೆ ವಿರುದ್ದ. ನಾಗರಿಕರ ಹಕ್ಕನ್ನು ಕಾರ್ಯಾಂಗ ನಿರ್ಧರಿಸಲಾಗದು ಎಂದು ಸಿಜೆಐ ಅಭಿಪ್ರಾಯಪಟ್ಟರು. ನಿಯೋಜಿತ ಅಧಿಕಾರಿ ವರದಿ ಸಲ್ಲಿಸುವ ವರೆಗೂ ಆಸ್ತಿಯ ಮಾಲೀಕತ್ವಕ್ಕೆ ಯಾವುದೇ ಸಮಸ್ಯೆಯಾಗದು ಎಂದು ಕೋರ್ಟ್ ಹೇಳಿತು.

ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರನ್ನು ಸದಸ್ಯರಾಗಿ ನೇಮಕ ಮಾಡುವುದಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಂ ಆಗಿರಬೇಕು ಎಂದು ಕೋರ್ಟ್ ಹೇಳಿದೆ. ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ 4 ಮಂದಿಗಿಂತ ಹೆಚ್ಚು ಮುಸ್ಲಿಮೇತರರು ಇರಬಾರದು, ರಾಜ್ಯ ವಕ್ಫ್ ಬೋರ್ಡ್‌ಗಳಲ್ಲಿ ಈ ಸಂಖ್ಯೆ 3 ಮೀರಬಾರದು ಎಂದು ಹೇಳಿದೆ.

(ಲೈವ್‌ ಲಾ ವರದಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.