ಕೋಲ್ಕತ್ತ: ಕೆಲಸ ಮುಗಿಸಿಕೊಂಡು ಕ್ಯಾಬ್ನಲ್ಲಿ ಮನೆಗೆ ಹೊರಟಿದ್ದ ರೂಪದರ್ಶಿ ಹಾಗೂ ನಟಿ ಉಶೋಷಿ ಸೇನ್ಗುಪ್ತ (30) ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ 7 ಮಂದಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ 11.40ಕ್ಕೆ ಈ ಘಟನೆ ನಡೆದಿದೆ. ಸೇನ್ಗುಪ್ತ ಅವರು ಹೋಗುತ್ತಿದ್ದ ಕ್ಯಾಬ್ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಹದಿನೈದು ಮಂದಿ ಯುವಕರ ಗುಂಪು ಕ್ಯಾಬ್ ಚಾಲಕನನ್ನು ಹೊರಗೆ ಎಳೆದು ಹಿಗ್ಗಾಮುಗ್ಗಾ ಥಳಿಸಿದೆ.
‘ಚಾಲಕನ್ನು ಥಳಿಸಲು ಮುಂದಾಗುತ್ತಿದ್ದಂತೆ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಈ ಘಟನೆ ಸ್ಥಳ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಚಾಲಕನ ಹತ್ಯೆಯಾಗುವ ಸಾಧ್ಯತೆ ಇದೆ. ಸಹಾಯಕ್ಕೆ ಬನ್ನಿ ಎಂದು ಮನವಿ ಮಾಡಿದ ನಂತರ ಇಬ್ಬರು ಅಧಿಕಾರಿಗಳು ಸ್ಥಳಕ್ಕೆ ಬಂದರು. ಅಷ್ಟರಲ್ಲಿಯೇ ಯುವಕರು ಪರಾರಿಯಾಗಿದ್ದರು.
ನಂತರ ಭವಾನಿಪೋರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಬಂದರು. ಆದರೆ, ಮಧ್ಯರಾತ್ರಿ ಆಗಿದ್ದರಿಂದ ಮಂಗಳವಾರ ದೂರು ನೀಡಬೇಕಾಯಿತು’ ಎಂದು ಸೇನ್ಗುಪ್ತ ಹೇಳಿದ್ದಾರೆ.
‘ಹಲ್ಲೆ ಬಳಿಕ ಕ್ಯಾಬ್ ಚಾಲಕ, ನನ್ನ ಸ್ನೇಹಿತೆ ಹಾಗೂ ನನ್ನನ್ನು ಮನೆಗೆ ತಲುಪಿ ಸಲುವಾಹನ ಓಡಿಸಲು ಮುಂದಾಗುತ್ತಿದ್ದಂತೆ ಮತ್ತೆ ಯುವಕರ ಗುಂಪು ಪ್ರತ್ಯಕ್ಷವಾಯಿತು. ಹಲ್ಲೆ ನಡೆಸಿದ ದೃಶ್ಯದ ವಿಡಿಯೊ ಅಳಿಸಿ ಹಾಕಲು ನನ್ನ ಮೊಬೈಲ್ ಕಸಿದುಕೊಳ್ಳಲು ಮುಂದಾಯಿತು. ನನ್ನನ್ನು ಎಳೆದಾಡಿ, ನಿಂದಿಸಿದರು. ನನ್ನ ತಂದೆಗೆ ಹಾಗೂ ಸಹೋದರಿಗೆ ದೂರವಾಣಿ ಕರೆ ಮಾಡಲು ಮುಂದಾಗುತ್ತಿದ್ದಂತೆ ಯುವಕರು ಪರಾರಿಯಾದರು. ಆದರೆ, ಸಮೀಪದ ಚಾರು ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರು’ ಎಂದು ಅವರು ಹೇಳಿದ್ದಾರೆ.
ಎಫ್ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರ ವಿರುದ್ಧ ತನಿಖೆ ನಡೆಸಲು ಕೋಲ್ಕತ್ತ ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ. ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.