ನವದೆಹಲಿ: ‘ದೇಶಕ್ಕೆ ಸೂಪರ್ ಪವರ್ ಆಗುವ ಎಲ್ಲ ಸಾಮರ್ಥ್ಯಗಳೂ ಇದ್ದು, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡುವ ಅವಶ್ಯಕತೆ ಇದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸೋಮವಾರ ತಿಳಿಸಿದರು.
ಐಐಎಂ ರಾಂಚಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ನಾವು ದೇಶವನ್ನು ಸೂಪರ್ ಪವರ್ ಆಗಿ ಮಾಡಲು ಬಯಸುತ್ತಿದ್ದೇವೆ. ದೇಶದೊಳಗಿನ ಸಾಮರ್ಥ್ಯ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ’ ಎಂದರು.
‘ದೇಶವನ್ನು ಸೂಪರ್ ಪವರ್ ಮಾಡಲು, ಎಲ್ಲಾ ರಾಜ್ಯಗಳಲ್ಲಿನ ಅಭಿವೃದ್ಧಿ ಸಾಮರ್ಥ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ. ದೇಶದ ಯುವಜನರು ಯಾವುದೇ ಸವಾಲನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆವಿಷ್ಕಾರ, ನಾವೀನ್ಯತೆ ಮತ್ತು ಆಲೋಚನೆಗಳ ಸಹಾಯದಿಂದ ಅವರ ಸಾಮರ್ಥ್ಯವನ್ನು ಅವಕಾಶವನ್ನಾಗಿ ಪರಿವರ್ತಿಸಬಹುದು’ ಎಂದು ಹೇಳಿದರು.
‘ನವ ಭಾರತ’ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಅವರು, ದೇಶದ ಅದ್ಭುತ ಇತಿಹಾಸದಿಂದ ಸ್ಫೂರ್ತಿ ಪಡೆಯಲು ಆಧುನಿಕ ಶಿಕ್ಷಣವು ತಡೆಯಾಗಬಾರದು’ ಎಂದರು.
‘ಗಣಿತ ಮತ್ತು ಖಗೋಳ ಶಾಸ್ತ್ರ, ವೈಜ್ಞಾನಿಕ ಸಂಶೋಧನಾ ಕ್ಷೇತ್ರಕ್ಕೆ ಭಾರತದ ಐತಿಹಾಸಿಕ ಕೊಡುಗೆಯನ್ನು ಇದೇ ವೇಳೆ ಸ್ಮರಿಸಿದ ಅವರು, ಜರ್ಮನಿಯ ಪ್ರಸಿದ್ಧ ಖಗೋಳ ವಿಜ್ಞಾನಿ ಕೊಪರ್ನಿಕಸ್ ಭೂಮಿ ದುಂಡಗಿದೆ ಎಂದು ತಿಳಿಸುವ ಸಾವಿರ ವರ್ಷಗಳ ಮೊದಲೇ ಆರ್ಯಭಟ ಅದನ್ನು ತಿಳಿಸಿದ್ದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.