ನವದೆಹಲಿ: ಕೇರಳದಲ್ಲಿನ ಉದ್ದೇಶಿತ ಸೆಮಿ-ಹೈ-ಸ್ಪೀಡ್ ಕೆ-ರೈಲ್-ಸಿಲ್ವರ್ಲೈನ್ ಯೋಜನೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೇರಳದ ಯುಡಿಎಫ್ ಸಂಸದರು ಆರೋಪಿಸಿದ್ದಾರೆ.
ಗುರುವಾರದ ಲೋಕಸಭೆ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರು, 'ಗುರುವಾರ ಬೆಳಗ್ಗೆ 10.45ರ ವೇಳೆಗೆ ವಿಜಯ್ಚೌಕ್ನಿಂದ ಮಹಿಳಾ ಸಂಸದರು ಸೇರಿದಂತೆ 12 ಸಂಸದರು ಪ್ರತಿಭಟನೆ ಕೈಗೊಂಡೆವು. ಈ ವೇಳೆ ಯಾವುದೇ ಪ್ರಚೋದನಾಕಾರಿ ರೀತಿಯಾಗಿ ನಡೆದುಕೊಳ್ಳದಿದ್ದರೂ, ದೆಹಲಿ ಪೊಲೀಸರು ನಮ್ಮನ್ನು ತಡೆದರು. ಈ ವೇಳೆ ನಾವು ಸಂಸದರು ಎಂದು ಹೇಳಿದರೂ, ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿ, ನೂಕಾಡಿದ್ದಾರೆ' ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್ಎಸ್ಪಿ ಸಂಸದ ಎನ್.ಕೆ ಪ್ರೇಮಚಂದ್ರನ್ ಅವರು, ಇದು ದುರದೃಷ್ಟಕರ ಘಟನೆ. ಪ್ರತಿಭಟನೆ ನಡೆಸುತ್ತಿರುವುದು ಸಂಸದರು ಎಂದು ತಿಳಿದಿದ್ದರೂ, ಅವರನ್ನು ಪೊಲೀಸರು ಸಂಸತ್ ಆವರಣಕ್ಕೆ ಬಿಟ್ಟುಕೊಂಡಿಲ್ಲ ಎಂದು ದೂರಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ಈ ವಿಚಾರವನ್ನು ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.