ನವದೆಹಲಿ: ಮುಂದಿನ ಯುದ್ಧಗಳನ್ನು ಭಾರತವು ಸ್ವದೇಶಿ ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಿ ಗೆಲ್ಲುತ್ತದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ನ ನಿರ್ದೇಶಕರ 41ನೇ ಸಮಾವೇಶದಲ್ಲಿ ಮಾತನಾಡಿರುವ ಅವರು, ‘ದೇಶದ ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವತ್ತ ಡಿಆರ್ಡಿಒ ದಾಪುಗಾಲಿಟ್ಟಿದೆ. ಅದೂ, ಸ್ವದೇಶಿ ತಂತ್ರಜ್ಞಾನದ ಅಳವಡಿಕೆಯ ಮೂಲಕ. ಇನ್ನು ಮುಂದಿನ ಯುದ್ಧಗಳನ್ನು ಭಾರತ ಸ್ವದೇಶಿ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸುತ್ತದೆ ಮತ್ತು ಗೆಲ್ಲುತ್ತದೆ,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರವು ಈಗಷ್ಟೇ ತಲೆ ಎತ್ತುತ್ತಿರುವ ಉದ್ಯಮ. ಆದರೆ, ಭವಿಷ್ಯದ ಅಗತ್ಯವನ್ನೂ ಪೂರೈಸಲು ರಕ್ಷಣಾ ಸಂಶೋಧನಾ ಕ್ಷೇತ್ರ ಅಭಿವೃದ್ಧಿ ಸಾಧಿಸಬೇಕಾದ ಸಮಯ ಬಂದಾಗಿದೆ. ನಾವು ‘ಸಂಪರ್ಕ ರಹಿತ‘ (ತಂತ್ರಜ್ಞಾನದ ನೆರವಿನ, ಪರಿಣಾಮಕಾರಿ ಮತ್ತು ಹೆಚ್ಚು ಹಾನಿ ಇಲ್ಲದ ಯುದ್ಧ ತಂತ್ರ) ಯುದ್ಧದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಭವಿಷ್ಯದ ಯುದ್ಧಗಳಿಗಾಗಿ ನಾವು ಈಗಿನಿಂದಲೇ ಸಜ್ಜಾಗಬೇಕಾಗಿದೆ. ಸೈಬರ್, ಬಾಹ್ಯಾಕಾಶ, ಲೇಸರ್, ಎಲೆಕ್ಟ್ರಾನಿಕ್ ಮತ್ತು ರೋಬೋಟಿಕ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಉಪಯೋಗವನ್ನು ನಾವು ಯುದ್ಧಗಳಿಗೆ ಬಳಸಿಕೊಳ್ಳಬೇಕಿದೆ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.