ನವದೆಹಲಿ: ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಮಡಿವಾಳ ಸಮುದಾಯಕ್ಕೆ ಏಳು ಗ್ಯಾರಂಟಿಗಳನ್ನು ಮಂಗಳವಾರ ಘೋಷಿಸಿದರು.
‘ಮಡಿವಾಳ ಅಭಿವೃದ್ಧಿ ನಿಗಮ’ ಸ್ಥಾಪನೆ, ಈ ಸಮುದಾಯಕ್ಕೆ ಗೃಹ ಬಳಕೆ ದರದಲ್ಲಿ ವಿದ್ಯುತ್ ಹಾಗೂ ನೀರು ಸರಬರಾಜು, ಅಗಸರ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಮತ್ತು ಯುವಕರಿಗೆ ಕೌಶಲ ತರಬೇತಿ, ಇಸ್ತ್ರಿ ಅಂಗಡಿಗಳ ನೋಂದಣಿ, ಇಸ್ತ್ರಿ ಅಂಗಡಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಪುನಃ ಆರಂಭ, ಸಮುದಾಯದ ಹಿರಿಯರಿಗಾಗಿ ಯೋಜನೆ– ಈ ಏಳು ಗ್ಯಾರಂಟಿಗಳನ್ನು ಎಎಪಿ ಘೋಷಿಸಿದೆ.
ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ದೆಹಲಿ ಮಡಿವಾಳ ಮಹಾಸಭಾದ ಪ್ರತಿನಿಧಿಗಳು ಹಲವು ಬೇಡಿಕೆಗಳನ್ನು ಮುಂದಿರಿಸಿದರು. ಬಳಿಕ ಕೇಜ್ರಿವಾಲ್ ಅವರು ಪತ್ರಿಕಾಗೋಷ್ಠಿ ನಡೆಸಿ ಗ್ಯಾರಂಟಿಗಳನ್ನು ಘೋಷಿಸಿದರು. ‘ಪಕ್ಷದ ರಾಷ್ಟ್ರೀಯ ಸಂಚಾಲಕನಾಗಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಗಸ ಸಮುದಾಯದ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಕೇಜ್ರಿವಾಲ್ ಹೇಳಿದರು.
‘ಸರ್ಕಾರದ ಹಲವು ಇಲಾಖೆಗಳು ನಮ್ಮ ಕುರಿತು ನಿರ್ಲಕ್ಷ್ಯ ಧೋರಣೆ ತೋರಿದ್ದವು. ನಾವು ಹಲವು ಸಂಕಷ್ಟ, ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಗ್ಯಾರಂಟಿಗಳಿಂದ ನಮಗೆ ಅನುಕೂಲವಾಗಲಿದೆ. ನಮ್ಮ ಸಮುದಾಯವು ಎಎಪಿಗೆ ಬೆಂಬಲ ಸೂಚಿಸುತ್ತದೆ’ ಎಂದು ಪ್ರತಿನಿಧಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.