ಕೋಲ್ಕತ್ತ: ಇಲ್ಲಿನ ಶಾಹಿದ್ ಮಿನಾರ್ ಮೈದಾನದಲ್ಲಿ ಭಾನುವಾರ ನಡೆದ ಅಮಿತ್ ಷಾ ಅವರ ಸಭೆಗೂ ಮುನ್ನ ಗೋಲಿ ಮಾರೊ ಘೋಷಣೆ ಕೂಗಿರುವುದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ‘ಕೋಲ್ಕತಾ ಬೀದಿಗಳಲ್ಲಿ ಗೋಲಿ ಮಾರೊ ಘೋಷಣೆ ಕೂಗಿರುವುದನ್ನ ನಾನು ಖಂಡಿಸುತ್ತೇನೆ. ಇದು ಬಂಗಾಳವೇ ಹೊರತು ದೆಹಲಿ ಅಲ್ಲ. ಇದನ್ನು ನಾವು ಸಹಿಸುವುದಿಲ್ಲ. ಇಲ್ಲಿನ ಕಾನೂನು ತನ್ನದೇ ಆದ ಕರ್ತವ್ಯ ನಿರ್ವಹಿಸಲಿದೆ’ ಎಂದು ಮಮತಾ ಹೇಳಿದ್ದಾರೆ.
ಇದೇ ವೇಳೆ ದೆಹಲಿ ಹಿಂಸಾಚಾರದ ಬಗ್ಗೆ ಮಾತನಾಡಿರುವ ಅವರು ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ನರಮೇಧ ಎಂದು ವ್ಯಾಖ್ಯಾನಿಸಿದ್ದಾರೆ.
ಭಾನುವಾರ ಕೋಲ್ಕತದಲ್ಲಿ ಗೋಲಿ ಮಾರೊ ಘೋಷಣೆ ಕೂಗಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.
ಈಶಾನ್ಯ ದೆಹಲಿಯ ಜಾಫ್ರಾಬಾದ್, ಶಿವ ವಿಹಾರ್, ಮುಸ್ತಾಬಾದ್ ಮತ್ತು ಸೀಲಾಂಪುರಗಳಲ್ಲಿ ಕಳೆದ ವಾರ ಸಂಭವಿಸಿದ ಹಿಂಸಾಚಾರದಲ್ಲಿ ಈವರೆಗೆ 46 ಜನರು ಸಾವನ್ನಪ್ಪಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.