
ಗುವಾಹಟಿ: ಗುವಾಹಟಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳನ್ನು ಒಳಗೊಂಡ ನೂತನ ಸಂಕೀರ್ಣಕ್ಕೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ನೂತನ ಸಂಕೀರ್ಣ ನಿರ್ಮಾಣವನ್ನು ವಿರೋಧಿಸಿ ವಕೀಲರ ಸಂಘದ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ನಗರದ ಹೃದಯ ಭಾಗದಲ್ಲಿದ್ದ ಹೈಕೋರ್ಟ್ ಸಂಕೀರ್ಣವನ್ನು ಬ್ರಹ್ಮಪುತ್ರ ನದಿಯ ಮತ್ತೊಂದು ತೀರದಲ್ಲಿರುವ ಉತ್ತರ ಗುವಾಹಟಿ ಭಾಗದ ರಂಗಮಹಲ್ಗೆ ಸ್ಥಳಾಂತರಗೊಳ್ಳುವುದರ ಬಗ್ಗೆ ಗುವಾಹಟಿ ಹೈಕೋರ್ಟ್ ವಕೀಲರ ಸಂಘವು ವಿರೋಧ ವ್ಯಕ್ತಪಡಿಸಿದೆ. ‘ನೂತನ ಸಂಕೀರ್ಣವು ಈಗಿತುವ ಕಟ್ಟಡದಿಂದ ಬಹಳ ದೂರವಿದೆ. ಇದರಿಂದ ಓಡಾಟಕ್ಕಾಗಿಯೇ ಹೆಚ್ಚು ಖರ್ಚಾಗುತ್ತದೆ’ ಎಂಬುದು ವಕೀಲರ ಆರೋಪ.
‘ಉತ್ತರ ಗುವಾಹಟಿಯನ್ನು ಸಂಪರ್ಕಿಸಲು ನೂತನ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಮುಂದಿನ ತಿಂಗಳು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಆಗ ನೂತನ ಸಂಕೀರ್ಣವನ್ನು 20ರಿಂದ 30 ನಿಮಿಷದಲ್ಲಿ ತಲುಪಬಹುದು’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳುತ್ತಾರೆ.
‘ವಕೀಲರು ತಪ್ಪು ತಿಳಿದುಕೊಂಡಿದ್ದಾರೆ. ಇಲ್ಲವೆ ಅವರಿಗೆ ಯುವ ವಕೀಲರ ಅಗತ್ಯಗಳು ಕಣ್ಣಿಗೆ ಕಾಣುತ್ತಿಲ್ಲ. ಹಳೇ ಕಟ್ಟಡದ ಹತ್ತಿರ ನಿಮ್ಮ ದೊಡ್ಡ ದೊಡ್ಡ ಕಚೇರಿಗಳು ಇವೆ ಎನ್ನುವ ವೈಯಕ್ತಿಕ ಹಿತಾಸಕ್ತಿಯ ವಿಚಾರಗಳ ಕಾರಣಕ್ಕೆ ಆಧುನಿಕ ಕಟ್ಟಡ ಬೇಡ, ಅಭಿವೃದ್ಧ ಬೇಡ ಎನ್ನುವುದು ಸರಿಯಲ್ಲ’ ಎಂದು ಸಿಜೆಐ ತಮ್ಮ ಭಾಷಣದಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.