ಕೋಲ್ಕತ್ತ: ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಮಾಜಿ ಸಚಿವ ಪಾರ್ಥ ಚಟರ್ಜಿ ಹೆಸರು ಸೇರಿಸಲು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಸಮ್ಮಿತಿಸಿದ್ದಾರೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ನಿಯಮಗಳ ಪ್ರಕಾರ ಯಾವುದೇ ದೋಷಾರೋಪ ಪಟ್ಟಿಯಲ್ಲಿ ರಾಜ್ಯದ ಸಚಿವರ ಹೆಸರನ್ನು ಸೇರಿಸಲು ರಾಜ್ಯಪಾಲರ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ.
ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಚಟರ್ಜಿ ಅವರು ಮೊದಲ ಬಾರಿಗೆ 2022ರ ಜುಲೈ 22ರಂದು ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿದ್ದರು. ಬಳಿಕ ಅವರನ್ನು ಸಿಬಿಐ ಬಂಧಿಸಿತ್ತು.
ಬಂಧನಕ್ಕೊಳಗಾದಾಗಿನಿಂದಲೂ ಸೆರೆಯಲ್ಲಿರುವ ಚಟರ್ಜಿ ಅವರನ್ನು 2022ರ ಜುಲೈ 28ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದಿಂದ ಕೈಬಿಟ್ಟಿದ್ದರು. ಚಟರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದಲೂ ಉಚ್ಛಾಟಿಸಲಾಗಿದೆ.
'ದೋಷಾರೋಪ ಪಟ್ಟಿಯಲ್ಲಿ ಪಾರ್ಥ ಚಟರ್ಜಿ ಅವರ ಹೆಸರನ್ನು ಸೇರಿಸಲು ಕೊನೆಗೂ ರಾಜ್ಯಪಾಲರ ಅನುಮೋದನೆ ಪಡೆದಿದ್ದೇವೆ ಎಂದು ಗುರುವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದೇವೆ. ನ್ಯಾಯಾಲಯವು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ' ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.