ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರ್ಯಾಲಿಯ ಮೇಲೆ ಕಲ್ಲು ತೂರಾಟ ನಡೆದಿದೆ.
ಕೇಂದ್ರ ಸಚಿವೆ ದೇವಶ್ರೀ ಚೌದರಿ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಇತ್ತೀಚೆಗೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಸೇರಿದಂತೆ ಹಲವು ನಾಯಕರು ಕೊಲ್ಕತ್ತಾದಲ್ಲಿ ಸೋಮವಾರ ನಡೆಸುತ್ತಿದ್ದ ರ್ಯಾಲಿಯ ಮೇಲೆ ಕಲ್ಲು ತೂರಲಾಗಿದೆ.
ಟಿಎಂಸಿ ಬಾವುಟ ಹಿಡಿದ ಕೆಲ ಮಂದಿ ಬಿಜೆಪಿಯ ಮೆರವಣಿಗೆ ಮೇಲೆ ಕಲ್ಲು ತೂರುವ ದೃಶ್ಯಗಳನ್ನು ಸುದ್ದಿ ಸಂಸ್ಥೆ ಎಎನ್ಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಕುಲ್ಲು ತೂರಿದ ಕೆಲ ಮಂದಿಯನ್ನು ಬಿಜೆಪಿಯ ನೂರಾರು ಕಾರ್ಯಕರ್ತರು ಅಟ್ಟಿಸಿ ಹೋಗುವ ದೃಶ್ಯವೂ ವಿಡಿಯೊದಲ್ಲಿದೆ.
ಇದೇ ಮೊದಲಲ್ಲ
ಕಳೆದ ವರ್ಷ ಡಿಸೆಂಬರ್ 10ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಹಿಂಬಾಲಕ ವಾಹನಗಳ ಮೇಲೂ ಕಲ್ಲು ತೂರಾಟ ನಡೆದಿತ್ತು. ಇದನ್ನು ಟಿಎಂಸಿ ನಡೆಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಟಿಎಂಸಿ ಆರೋಪವನ್ನು ನಿರಾಕರಿಸಿತ್ತು. ಘಟನೆಯನ್ನು ಬಿಜೆಪಿಯ ಯೋಜಿತ ಕೃತ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮಾನಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.