ADVERTISEMENT

ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಭಾರಿ ಮಳೆ: ಸಿಡಿಲು ಬಡಿದು 13 ಮಂದಿ ಸಾವು

ಪಿಟಿಐ
Published 24 ಜುಲೈ 2025, 15:52 IST
Last Updated 24 ಜುಲೈ 2025, 15:52 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಂಕುರಾ ಮತ್ತು ಪುರ್ಬಾ ಬರ್ಧಮನ್ ಜಿಲ್ಲೆಗಳಲ್ಲಿ ಗುರುವಾರ ಸಿಡಿಲು ಬಡಿದು ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಕುರಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಎಂಟು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವೈಭವ್ ತಿವಾರಿ ತಿಳಿಸಿದ್ದಾರೆ.

ADVERTISEMENT

ಒಂಡಾದಲ್ಲಿ ನಾಲ್ವರು, ಕೊತುಲ್ಪುರ್, ಜಾಯ್ಪುರ್, ಪತ್ರಸಾಯರ್ ಮತ್ತು ಇಂಡಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ತಿವಾರಿ ಮಾಹಿತಿ ನೀಡಿದ್ದಾರೆ.

ಪುರ್ಬಾ ಬರ್ಧಮನ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಐದು ಮಂದಿ ಐದು ಮಂದಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲೆಯ ಮಧಬ್ದಿಹಿಯಲ್ಲಿ ಇಬ್ಬರು, ಆಸ್ಗ್ರಾಮ್, ಮಂಗಲ್ಕೋಟ್ ಮತ್ತು ರೈನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಂಕುರಾದ ಒಂಡಾದಲ್ಲಿ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ನಾರಾಯಣ್ ಸಾರ್ (48), ಜಬಾ ಬೌರಿ (38), ತಿಲೋಕ ಮಾಲ್ (49) ಕೊನೆಯುಸಿರೆಳೆದಿದ್ದಾರೆ. ಆದರೆ, ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಮೃತಪಟ್ಟ ಇತರನ್ನು ಕೊಟುಲ್‌ಪುರದ ಜಿಯಾವುಲ್ ಹಕ್ ಮೊಲ್ಲಾ (50), ಪತ್ರಸೇಯರ್‌ನ ಜಿಬಾನ್ ಘೋಷ್ (20), ಇಂದಾಸ್‌ನ ಇಸ್ಮಾಯಿಲ್ ಮೊಂಡಲ್ (60) ಮತ್ತು ಜೋಯ್‌ಪುರದ ಉತ್ತಮ್ ಭುನಿಯಾ (38) ಎಂದು ಗುರುತಿಸಲಾಗಿದೆ.

ಪುರ್ಬಾ ಬರ್ಧಮನ್ ಜಿಲ್ಲೆಯಲ್ಲಿ ಸನಾತನ ಪತ್ರಾ (60), ಮಧಬ್ದಿಹಿಯ ಪರಿಮಳ್ ದಾಸ್ (32), ಆಸ್ಗ್ರಾಮ್‌ನ ರಬಿನ್ ತುಡು (25), ರೈನಾದ ಅಭಿಜಿತ್ ಸಂತ್ರಾ (25), ಮಂಗಲ್‌ಕೋಟ್‌ನ ಬುರೋ ಮಡ್ಡಿ (64) ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.