ನವದೆಹಲಿ: ಗಣರಾಜ್ಯೋತ್ಸವದ ಪರೇಡ್ನಲ್ಲಿ ಸಂಚರಿಸಲು ಪಶ್ಚಿಮ ಬಂಗಾಳ ಕಳುಹಿಸಿದ್ದ ಸ್ತಬ್ಧಚಿತ್ರ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಬಿಜೆಪಿ ಮತ್ತು ಟಿಎಂಸಿ ನಡುವಿನ ಮುನಿಸು ಮತ್ತಷ್ಟು ಹೆಚ್ಚುವಂತಾಗಿದೆ.
ಬಿಜೆಪಿಯ ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲಕ ಕಾಂಗ್ರೆಸ್ (ಟಿಎಂಸಿ), ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ತಿರಸ್ಕರಿಸುವ ಮೂಲಕ ನಮ್ಮ ಜನರಿಗೆ ಅವಮಾನ ಮಾಡಲಿದೆ ಎಂದು ಹೇಳಿದೆ.
ಪಶ್ಚಿಮ ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ತಪಸ್ ರಾಯ್, ‘ಬಿಜೆಪಿಯ ನೀತಿಗಳನ್ನು ವಿರೋಧಿಸುತ್ತಿರುವ ಒಂದೇ ಕಾರಣಕ್ಕೆ ಪಶ್ಚಿಮ ಬಂಗಾಳದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಜನ ವಿರೋಧಿ ಕಾನೂನುಗಳಾದ ಸಿಎಎಯನ್ನು ನಾವು ವಿರೋಧಿಸುತ್ತಿರುವುದಕ್ಕೆ, ಕೇಂದ್ರ ಸರ್ಕಾರ ನಮ್ಮ ಸ್ತಬ್ಧಚಿತ್ರ ಪ್ರಸ್ತಾವವನ್ನು ತಿರಸ್ಕರಿಸಿದೆ’ ಎಂದು ತಿಳಿಸಿದರು.
‘ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಪ್ರಸ್ತಾವವನ್ನು ಕೇಂದ್ರ ತಿರಸ್ಕರಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕಾಗಿ ಬಿಜೆಪಿ ಮುಂದೊಂದು ದಿನ ತಕ್ಕ ಉತ್ತರ ಪಡೆಯಲಿದೆ’ ಎಂದರು.
ಟಿಎಂಸಿಯ ಹೇಳಿಕೆಗೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್, ‘ಸ್ತಬ್ಧಚಿತ್ರ ಪ್ರಸ್ತಾವ ಕಳುಹಿಸುವ ನಿಯಮ ಮತ್ತು ಕಾರ್ಯವಿಧಾನವನ್ನು ರಾಜ್ಯ ಸರ್ಕಾರ ಸರಿಯಾಗಿ ಪಾಲಿಸದ ಕಾರಣ ಅದು ತಿರಸ್ಕಾರಗೊಂಡಿದೆ. ಪ್ರತಿಯೊಂದು ವಿಚಾರದಲ್ಲಿಯೂ ರಾಜಕಾರಣ ಮಾಡುವುದನ್ನು ಟಿಎಂಸಿ ಬಿಡಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.