ಜಗದಲಪುರ: ನಕ್ಸಲರೊಂದಿಗಿನ ಮಾತುಕತೆಯನ್ನು ತಳ್ಳಿಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಆಕರ್ಷಕವಾಗಿರುವ ಶರಣಾಗತಿ ಹಾಗೂ ಪುನರ್ವಸತಿ ನೀತಿಯನ್ನು ಒಪ್ಪಿಕೊಂಡ ಬಳಿಕ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕಾಗುತ್ತದೆ’ ಎಂದು ಹೇಳಿದರು.
ಛತ್ತೀಸಗಢದ ಬಸ್ತರ್ ಜಿಲ್ಲೆಯ ಜಗದಲಪುರಲ್ಲಿ ಶನಿವಾರ ಆಯೋಜಿಸಿದ್ದ ಬಸ್ತರ್ ದಸರಾ ಲೋಕೋತ್ಸವ ಹಾಗೂ ಸ್ವದೇಶಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಕ್ಸಲರೊಂದಿಗೆ ಮಾತುಕತೆ ನಡೆಸಲು ಕೆಲವರು ಕರೆದಿದ್ದಾರೆ. ಆದರೆ, ಅವರೊಂದಿಗೆ ಮಾತನಾಡಲು ಏನಿದೆ‘ ಎಂದು ಪ್ರಶ್ನಿಸಿದ್ದಾರೆ.
‘ಬಸ್ತರ್ ಹಾಗೂ ನಕ್ಸಲ್ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಛತ್ತೀಸಗಢ ಹಾಗೂ ಕೇಂದ್ರ ಸರ್ಕಾರಗಳು ಬದ್ಧವಾಗಿವೆ’ ಎಂದು ತಿಳಿಸಿದರು.
ಮಾ ದಂತೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದ ಶಾ, ‘ಮುಂದಿನ ಮಾರ್ಚ್ 31ರೊಳಗೆ ಇಡೀ ಬಸ್ತರ್ ಪ್ರದೇಶವನ್ನು ‘ಕೆಂಪು ಭಯೋತ್ಪಾದನೆ’ಯಿಂದ ಮುಕ್ತಗೊಳಿಸಲು ಭದ್ರತಾ ಪಡೆಗಳಿಗೆ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ಶಸ್ತ್ರಾಸ್ತ್ರಗಳ ಮೂಲಕ ಬಸ್ತರ್ನ ಶಾಂತಿಯನ್ನು ಕದಡುವವರಿಗೆ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.