ನವದೆಹಲಿ: ಮಾರ್ಚ್ 10ರಂದು ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಶಶಿ ತರೂರ್ ಸೇರಿದಂತೆ ಇತರೆ ನಾಯಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.
ಡ್ರಂಕ್ ಜರ್ನಲಿಸ್ಟ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಇಬ್ಬರು ಕಾಂಗ್ರೆಸ್ ನಾಯಕರನ್ನು ಹೆಸರಿಸಿ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಬಿಜೆಪಿಗೆ ಸೇರಲಿರುವ ನನ್ನ ಮುಂದಿನ ಎರಡು ಪಟ್ಟಿಗಳು 1) ಮಿಲಿಂದ ಡಿಯೋರಾ 2) ಶಶಿ ತರೂರ್ ಎಂದು ಟ್ವೀಟ್ ಮಾಡಿದ್ದಾರೆ.
ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತರೂರ್ ಇದಕ್ಕೆ ಪ್ರತಿಕ್ರಿಯಿಸಿ, ನೀವು ಅಮಲೇರಿರದವರೇ ಆಗಿದ್ದರೆ, ನಿಮ್ಮ ಪಟ್ಟಿಯಲ್ಲಿ ನನ್ನ ಹೆಸರು ಇರುವುದಿಲ್ಲ ಎಂದು ಹೇಳಿದ್ದಾರೆ.
ಇದಾದ ಒಂದು ಗಂಟೆಯೊಳಗೆ ಮಲಯಾಳಂನ ವೆಬ್ಸೈಟ್ವೊಂದು ಸುದ್ದಿ ಮಾಡಿದ್ದು, ತರೂರ್ ಕೂಡ ಸಿಂಧಿಯಾ ಹಾದಿಯನ್ನೇ ಹಿಡಿಯಲಿದ್ದಾರೆ ಎಂದು ಹೇಳಿದೆ.
ಈ ವರದಿಯನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟ್ ಮಾಡಿರುವ ತರೂರ್, ನಾನು ಬಿಜೆಪಿಗೆ ಸೇರುತ್ತೇನೆ ಎನ್ನುವ ಊಹಾಪೋಹವನ್ನು ಕೇಳಿ ಸಂತೋಷಪಡಬೇಕಿಲ್ಲ. ರಾಜಕೀಯವನ್ನು ವೃತ್ತಿಯನ್ನಾಗಿ ಮಾಡಿಕೊಂಡು ಈ ಕ್ಷೇತ್ರಕ್ಕೆ ಬಂದಿಲ್ಲ. ಆದರೆ ನಾಲ್ಕು ದಶಕಗಳಿಂದಲೂ ನನ್ನ ತತ್ವಗಳನ್ನು ನಿರೂಪಿಸಿಕೊಂಡೇ ಬಂದಿದ್ದೇನೆ. ಬೇಕಿದ್ದರೆ ಕಾಗದ ಪತ್ರಗಳಲ್ಲಿ ನೋಡಿ! ಅದನ್ನು ನನ್ನ ದಾಖಲೆಗಳೇ ಹೇಳುತ್ತವೆ. ನಾನು ಎಂದಿಗೂ ಅವಕಾಶವಾದಿಯಾಗಿರಲಿಲ್ಲ ಮತ್ತು ಅದನ್ನು ಈಗ ಶುರು ಮಾಡುವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆದ ದೊಡ್ಡ ಬೆಳವಣಿಗೆಯೊಂದರಲ್ಲಿ ಮಾರ್ಚ್ 10ರಂದು ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ಬಳಿಕ 22 ಶಾಸಕರು ರಾಜೀನಾಮೆ ನೀಡಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ ರಾಜೀನಾಮೆ ಪತ್ರದಲ್ಲಿ, 'ಈಗ ನಾನು ಮುನ್ನಡೆಯುವ ಸಮಯ' ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.