ADVERTISEMENT

ಪಂಜಾಬ್ ಚುನಾವಣೆಯಲ್ಲಿ ಪ್ರತಿಧ್ವನಿಸಿದ ಹಿಜಾಬ್

ಪ್ರತ್ಯೇಕತಾವಾದಿಯಿಂದ ಮುಸ್ಲಿಮರಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 21:25 IST
Last Updated 19 ಫೆಬ್ರುವರಿ 2022, 21:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಂಗ್ರೂರ್: ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿವಾದವು ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲೂ ಪ್ರತಿಧ್ವನಿಸಿದೆ.

ಮಲೇರ್‌ಕೋಟ್ಲಾದ ಅಮರ್‌ಗಡ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಐಪಿಎಸ್ ಅಧಿಕಾರಿ ಸಿಮ್ರನ್‌ಜಿತ್ ಸಿಂಗ್ ಮಾನ್ ಅವರು ಹಿಜಾಬ್ ಧರಿಸಿರುವ ಬಾಲಕಿಯ ಜೊತೆ ತೆಗೆಸಿಕೊಂಡಿರುವ ಚಿತ್ರ ಗಮನ ಸೆಳೆದಿದೆ. ಮಾನ್ ಅವರನ್ನು ಹೊರತುಪಡಿಸಿ, ಬೇರಾವ ಪಕ್ಷಗಳ ನಾಯಕರೂ ಚುನಾವಣಾ ಪ್ರಚಾರದಲ್ಲಿ ಹಿಜಾಬ್ ಪ್ರಕರಣವನ್ನು ಪ್ರಸ್ತಾಪಿಸಿಲ್ಲ.

ಮಾನ್ ಅವರು ಕರ್ನಾಟಕದ ಮುಸ್ಲಿಮರನ್ನು ಪಂಜಾಬ್‌ಗೆ ಆಹ್ವಾನಿಸಿದ್ದಾರೆ. ಸಂವಿಧಾನದಡಿ ಧಾರ್ಮಿಕ ಸ್ವಾತಂತ್ರ್ಯ ಅನುಭವಿಸಲು ಪಂಜಾಬ್‌ಗೆ ಬನ್ನಿ ಎಂದು ಅವರು ಕರೆ ನೀಡಿದ್ದಾರೆ.

ADVERTISEMENT

ತೀವ್ರಗಾಮಿ ಸಿದ್ಧಾಂತದಲ್ಲಿ ನಂಬಿಕೆ ಇರಿಸಿಕೊಂಡಿರುವ ಮಾನ್ ಅವರ ಪಕ್ಷ ಎಸ್‌ಎಡಿ (ಅಮೃತಸರ), ಪ್ರತ್ಯೇಕ ಖಲಿಸ್ತಾನಕ್ಕಾಗಿ ಬೇಡಿಕೆಯಿಟ್ಟು ಚುನಾವಣೆಗೆ ಸ್ಪರ್ಧಿಸಿರುವ ಏಕೈಕ ಪಕ್ಷವಾಗಿದೆ.ಮುಖ್ಯವಾಹಿನಿಯ ಪಕ್ಷಗಳೊಂದಿಗೆ ಮಾನ್ ಅವರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಕರ್ನಾಟಕದ ಹಿಜಾಬ್ ಗದ್ದಲದ ಕುರಿತು ಅವರು ತೆಗೆದುಕೊಂಡ ನಿಲುವು ಮುಸ್ಲಿಂ ಪ್ರಾಬಲ್ಯದ ಮಲೇರ್‌ಕೋಟ್ಲಾದಲ್ಲಿ ಮಹತ್ವ ಪಡೆದುಕೊಂಡಿದೆ.

ಮಾನ್ ಅವರು ಸ್ಪರ್ಧಿಸಿರುವ ಅಮರ್‌ಗಡವು ಕೆಲವು ಕಾರಣಗಳಿಂದ ಚುನಾವಣೆಯಲ್ಲಿ ಮಹತ್ವ ಪಡೆದಿದೆ. ಖಲಿಸ್ತಾನ್ ಕುರಿತ ವಿಚಾರಗಳುಈಗಲೂ ಪ್ರಚಲಿತದಲ್ಲಿರುವ ಪಂಜಾಬ್‌ನ ಕೆಲವು ಪ್ರದೇಶಗಳಲ್ಲಿ ಅಮರ್‌ಗಡ ಮುಖ್ಯವಾದುದು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ದೀಪ್ ಸಿಧು ಅವರು ಮಾನ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ರೈತರ ಪ್ರತಿಭಟನೆ ವೇಳೆಕೆಂಪುಕೋಟೆಯಲ್ಲಿ ಸಿಖ್ ಧಾರ್ಮಿಕ ಧ್ವಜ ನಿಶಾನ್ ಸಾಹಿನ್ ಹಾರಿಸಿ ಸಿಧು ಸುದ್ದಿಯಾಗಿದ್ದರು.

ಒಂದು ಕೈಯಲ್ಲಿ ಪೊರಕೆ (ಎಎಪಿ ಚಿಹ್ನೆ) ಮತ್ತೊಂದು ಕೈಯಲ್ಲಿ ಕೃಪಾಣ (ಸಿಖ್ಖರ ಚಿಹ್ನೆ) ಹಿಡಿದಿದ್ದ ದೀಪ್ ಸಿಧು, ಕೃಪಾಣದ ಬದಲು ಬೇರೆಯದನ್ನು ಆಯ್ಕೆ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದ ವಿಡಿಯೊ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.