ADVERTISEMENT

ತೆರಿಗೆ ದುಡ್ಡು ಯಾವುದಕ್ಕೆ ಬಳಕೆಯಾಗಬೇಕು?: ಜನಾಭಿಮತಕ್ಕೆ ಕೇಜ್ರಿವಾಲ್‌ ಒತ್ತಾಯ

ಉಚಿತ ಯೋಜನೆಗಳಿಂದ ಸ್ವಾವಲಂಬಿ ರಾಷ್ಟ್ರಕ್ಕೆ ತೊಡಕು ಎಂಬ ಪಿಎಂ ಮೋದಿ ಹೇಳಿಕೆಗೆ ತಿರುಗೇಟು

ಪಿಟಿಐ
Published 11 ಆಗಸ್ಟ್ 2022, 7:09 IST
Last Updated 11 ಆಗಸ್ಟ್ 2022, 7:09 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ತೆರಿಗೆದಾರರ ದುಡ್ಡು ಯಾವುದಕ್ಕೆ ಬಳಕೆಯಾಗಬೇಕು ಎಂಬುದರ ಬಗ್ಗೆ ಜನಾಭಿಮತ ಸಂಗ್ರಹಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಒತ್ತಾಯಿಸಿದ್ದಾರೆ.

ತೆರಿಗೆದಾರರ ದುಡ್ಡು ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಬಳಕೆಯಾಗಬೇಕೆ ಅಥವಾ ಒಬ್ಬ ವ್ಯಕ್ತಿಯ ಕುಟುಂಬ ಅಥವಾ ಸ್ನೇಹಿತರ ಕಲ್ಯಾಣಕ್ಕೆ ವ್ಯಯಿಸಬೇಕೆ ಎಂಬುದರ ಬಗ್ಗೆ ಜನಾಭಿಮತ ಸಂಗ್ರಹವಾಗಬೇಕು ಎಂದು ಕೇಜ್ರಿವಾಲ್‌ ಆಗ್ರಹಿಸಿದ್ದಾರೆ.

ಉಚಿತ ಯೋಜನೆಗಳು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ಪ್ರಯತ್ನಕ್ಕೆ ತೊಡಕಾಗಿದೆ ಮತ್ತು ತೆರಿಗೆದಾರರಿಗೆ ಹೊರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ವರಿಷ್ಠ ಕೇಜ್ರಿವಾಲ್‌, ಹಾಗಿದ್ದರೆ ಸರ್ಕಾರದ ಕೆಲಸವೇನು? ತೆರಿಗೆದಾರರ ದುಡ್ಡನ್ನು ಜನರ ಏಳ್ಗೆಗಾಗಿ ಖರ್ಚು ಮಾಡದಿರುವುದು ಮೋಸವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ವೈದ್ಯಕೀಯ ನೆರವು ಸಿಗುತ್ತಿದೆ ಎಂದಾದರೆ ತೆರಿಗೆದಾರರು ಸಂತೋಷ ಪಡುತ್ತಾರೆ. ನಮ್ಮ ದುಡ್ಡು ನಮ್ಮ ಮಕ್ಕಳಿಗೆ ಬಳಕೆಯಾಗುತ್ತಿದೆ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. ಆದರೆ ತೆರಿಗೆದಾರರ ದುಡನ್ನು ರಾಜಕಾರಣಿಗಳು ತಮ್ಮ ಸ್ವಂತಕ್ಕೆ ಅಥವಾ ಅವರ ಸ್ನೇಹಿತರಿಗಾಗಿ ಬಳಸಿಕೊಳ್ಳುವುದು ವಂಚನೆಯಾಗಿದೆ. ಪ್ರಬಲ ವ್ಯಕ್ತಿಗಳಾಗಿರುವ ಕೆಲವು ಸ್ನೇಹಿತರಿಗೆ ತೆರಿಗೆ ದುಡ್ಡನ್ನು ವ್ಯಯಿಸುತ್ತಿರುವುದರಿಂದ ಮೋಸ ಹೋಗಿದ್ದೇವೆ ಎಂಬ ಭಾವನೆ ಜನರನ್ನು ಕಾಡುತ್ತಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

₹10 ಲಕ್ಷ ಕೋಟಿ ಮೊತ್ತದ ಬ್ಯಾಂಕ್‌ ಸಾಲಗಳ ವಂಚನೆಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡದೆ ಇದ್ದಿದ್ದರೆ ರಾಷ್ಟ್ರದಲ್ಲಿ ಇಂದು ಆರ್ಥಿಕ ಬಿಕ್ಕಟ್ಟು ಸಂಭವಿಸುತ್ತಿರಲಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.