ADVERTISEMENT

ದೇಶ ಮುನ್ನಡೆಸಲು ನಾಯಕರಿದ್ದಾರೆ; ಮೋದಿಗೆ ಗೇಟ್‌ ಪಾಸ್ ನೀಡಿ: ಮಮತಾ ವಾಗ್ದಾಳಿ

ಏಜೆನ್ಸೀಸ್
Published 1 ಏಪ್ರಿಲ್ 2019, 3:10 IST
Last Updated 1 ಏಪ್ರಿಲ್ 2019, 3:10 IST
   

ವಿಶಾ‌ಖಪಟ್ಟಣ: ‘ನಮ್ಮ ಪ್ರಧಾನಿ ಅಭ್ಯರ್ಥಿ ಬಗ್ಗೆ ಕೇಳಲು ಮೋದಿ ಯಾರು? ನಮ್ಮ ನಾಯಕನನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದು ನಮಗೆ ಗೊತ್ತು. ದೇಶವನ್ನು ಮುನ್ನೆಡೆಸಲು ಯಾರಾದರೊಬ್ಬರು ಇದ್ದೇ ಇರುತ್ತಾರೆ’

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ತೆಲುಗು ದೇಶ ಪಕ್ಷದ ಬೃಹತ್‌ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಬಗ್ಗೆ ಮೋದಿ ಕೇಳಿದ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ್ದು ಹೀಗೆ.

‘ಬಿಜೆಪಿ ಆಡಳಿತವಿಲ್ಲದ ಎಲ್ಲಾ ರಾಜ್ಯಗಳಲ್ಲಿಯೂ (ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶಗಳಲ್ಲಿ) ಸಿಬಿಐ, ಐಟಿ, ಜಾರಿ ನಿರ್ದೇಶನಾಲಯಗಳ ಅಧಿಕಾರಿಗಳಿಂದ ದಾಳಿ ನಡೆಸಿ, ಮೋದಿ ಬೆದರಿಸುವ ತಂತ್ರ ಬಳಸುತ್ತಿದ್ದಾರೆ. ಮೋದಿ ಅವರು ಜನ ನಾಯಕ ಆಗಲಿಲ್ಲ. ಬದಲಿಗೆ ಶ್ರೀಮಂತರ, ಭ್ರಷ್ಟರ ಮತ್ತು ಹಗರಣಗಾರರ ನಾಯಕರಾದರು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಆಂಧ್ರಪ್ರದೇಶದ ಹೆಸರು ವಿಶ್ವಕ್ಕೆ ಪರಿಚಿತವಾಗಿರುವುದು ಚಂದ್ರಬಾಬು ನಾಯ್ಡು ಅವರಿಂದಲೇ ಹೊರತು ಮೋದಿಯಿಂದ ಅಲ್ಲ. ಯಾರಾದರೊಬ್ಬರು ಈ ದೇಶವನ್ನು ಮುನ್ನಡೆಸಲು ಸಾಧ್ಯ ಎಂದರೆ ಅದು ನಾಯ್ಡು ಅವರು.ನಮ್ಮ ದೇಶದಲ್ಲಿ ನಾಯಕರಿಗೇನು ಕೊರತೆಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೇಟ್‌ ಪಾಸ್‌ ನೀಡಬೇಕು’ ಎಂದರು.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌, ‘ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯಬೇಕು ಎಂದು ಪಾಕಿಸ್ತಾನ ಪ್ರಯತ್ನಿಸುತ್ತಲೇ ಬಂದಿತ್ತು. ಆದರೆ, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಮಾಡಲು ಸಾಧ್ಯವಾಗದ್ದನ್ನು ಕೇವಲ 5 ವರ್ಷಗಳಲ್ಲಿ ಮೋದಿ-ಅಮಿತ್‌ ಶಾ ಮಾಡಿ ತೋರಿಸಿದರು. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಿಬಿಟ್ಟರು’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.