ಉತಂಗರೈನಲ್ಲಿ ಮಳೆಯಿಂದಾದ ಅವಾಂತರದ ವಿಹಂಗಮ ನೋಟ
–ಪಿಟಿಐ ಚಿತ್ರ
ಚೆನ್ನೈ: ಫೆಂಜಲ್ ಚಂಡಮಾರುತವು ತಮಿಳುನಾಡಿನ ಚೆನ್ನೈನಿಂದ ಚೆಂಗಲ್ಪಟ್ಟುವರೆಗೆ ಮತ್ತು ದೂರದ ಕೃಷ್ಣಗಿರಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಸಿದೆ. ಕೃಷ್ಣಗಿರಿಯಲ್ಲಿ 24 ತಾಸುಗಳಲ್ಲಿ 50 ಸೆಂಟಿಮೀಟರ್ನಷ್ಟು ಮಳೆಯಾಗಿದೆ. 300 ವರ್ಷಗಳಿಗೊಮ್ಮೆ ಇಂಥ ಮಳೆಯಾಗುತ್ತದೆ.
ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಾದ ತಿರುವಳ್ಳೂರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುನಲ್ಲಿ ಚಂಡಮಾರುತವು ಮೊದಲು ಪ್ರಭಾವ ಬೀರಿತ್ತು. ನಂತರ ತಮಿಳುನಾಡಿನ ವಿಲ್ಲುಪುರಂ, ಕಡಲೂರು ಮತ್ತು ಪುದುಚೇರಿಯತ್ತ ಸಾಗಿ ಅಧಿಕ ಮಳೆ ಸುರಿಸಿದೆ. ಬಳಿಕ ತಿರುವಣ್ಣಮಲೈ, ರಾಣಿಪೇಟ್, ವೆಲ್ಲೂರು, ಧರ್ಮಪುರಿ, ಕೃಷ್ಣಗಿರಿ, ಸೇಲಂ ಮತ್ತು ಕರ್ನಾಟಕದ ಮೈಸೂರಿನಲ್ಲೂ ಮಳೆ ಸುರಿಸಿದೆ.
ಕೃಷ್ಣಗಿರಿಯ ಒಳನಾಡು ಪ್ರದೇಶ ಉತ್ತಂಗರೈನಲ್ಲಿ 50 ಸೆಂ. ಮೀ. ಮಳೆಯಾಗಿದೆ. ಇದೊಂದು ‘ಅಪರೂಪದ ಸಂಗತಿ’. ಕೃಷ್ಣಗಿರಿ, ಧರ್ಮಪುರಿ ಮತ್ತು ಸೇಲಂ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಾನುವಾರ ಮತ್ತು ಸೋಮವಾರ ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
‘ನಿಧಾನಗತಿಯಲ್ಲಿ ಸಾಗುವ ಚಂಡಮಾರುತಗಳು ಅತ್ಯಂತ ಅಪಾಯಕಾರಿ. ಉತ್ತಂಗರೈನಲ್ಲಿ ಎಂದೂ ಇಷ್ಟೊಂದು ಮಳೆಯಾಗಿರಲಿಲ್ಲ. ನಿಧಾನಗತಿಯ ಫೆಂಜಲ್ ಚಂಡಮಾರುತವು ಇಲ್ಲಿ ಇಷ್ಟೊಂದು ಮಳೆಗೆ ಕಾರಣವಾಗಿದೆ’ ಎಂದು ಹವಾಮಾನ ತಜ್ಞ ಪ್ರದೀಪ್ ಜಾನ್ ಹೇಳಿದ್ದಾರೆ.
ವಾತಾವರಣದ ಕೆಳ ಮತ್ತು ಮಧ್ಯಮ ಮಟ್ಟದಲ್ಲಿ ಮಾರುತಗಳು ಒಗ್ಗೂಡಿರುವುದರಿಂದ ಮತ್ತು ಫೆಂಜಲ್ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಿದೆ ಎಂದು ಮತ್ತೊಬ್ಬ ತಜ್ಞ ಅಜಿತ್ ಕುಮಾರ್ ಹೇಳಿದ್ದಾರೆ.
ಫೆಂಜಲ್ ಚಂಡಮಾರುತವು ಪುದುಚೇರಿ–ವಿಲ್ಲುಪುರಂ–ತಿರುವಣ್ಣಮಲೈ ಪ್ರದೇಶದಲ್ಲಿ ಸುಮಾರು 30 ಗಂಟೆಗಳ ಕಾಲ ಇತ್ತು. ಹೀಗಾಗಿ ಇಲ್ಲಿ ಭಾರಿ ಮಳೆಯಾಗಿದೆ. ಚಂಡಮಾರುತ ದುರ್ಬಲವಾಗಿದ್ದರೂ, ಈ ಪ್ರದೇಶದಲ್ಲಿ ಮಾರುತಗಳ ಒಗ್ಗೂಡುವಿಕೆಯು ಹೆಚ್ಚು ಕಾಲ ಮೋಡ ಕವಿದ ವಾತಾವರಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಇಲ್ಲಿ ಅಧಿಕ ಮಳೆಯಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.