ಮುಂಬೈ: ‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಮೇಲೂ ಶ್ರೀನಗರದ ಲಾಲ್ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದ ಯುವಕರನ್ನು ಪೊಲೀಸರು ಏಕೆ ತಡೆದಿದ್ದಾರೆ‘ ಎಂದು ಶಿವಸೇನಾ ಪ್ರಶ್ನಿಸಿದೆ.
ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಈ ಕುರಿತು ಪ್ರಶ್ನಿಸಿರುವ ಶಿವಸೇನಾ, ‘370ನೇ ವಿಧಿಯನ್ನು ರದ್ದುಪಡಿಸಿದ ನಂತರಜಮ್ಮು ಮತ್ತು ಕಾಶ್ಮೀರದಲ್ಲಿ ಏನು ಬದಲಾಗಿದೆ ಮತ್ತು ‘ಹಿಂದುತ್ವ ಅಂದರೆ ರಾಷ್ಟ್ರೀಯತೆ‘ ಅಲ್ಲವೇ‘ ಎಂದು ಕೇಳಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಳ್ಳುತ್ತಿರುವ ಮೂವರನ್ನು ಸೋಮವಾರ ಶ್ರೀನಗರದ ಲಾಲ್ ಚೌಕ್ನಲ್ಲಿ ತ್ರಿವರ್ಣ ಹಾರಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
‘ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುವ 'ನಕಲಿ ಧೈರ್ಯಶಾಲಿ'ಗೆ ಕೇಂದ್ರ ಸರ್ಕಾರವು ಭದ್ರತೆ ನೀಡಿದರೆ, ಕಾಶ್ಮೀರದಲ್ಲಿ ತ್ರಿವರ್ಣವನ್ನು ಹಾರಿಸುವ ಯುವಕರನ್ನು ಪೊಲೀಸರು ಕರೆದೊಯ್ಯುತ್ತಾರೆ" ಎಂದು ನಟಿ ಕಂಗನಾ ರನೌತ್ ಹೆಸರು ಪ್ರಸ್ತಾಪಿಸಿದೇ ಸೇನಾ ಕುಟುಕಿದೆ.
‘ಶ್ರೀನಗರದ ಲಾಲ್ ಚೌಕ್ನಲ್ಲಿ ಯುವಕರು ತ್ರಿವರ್ಣವನ್ನು ಏಕೆ ಹಾರಿಸಲಾಗಲಿಲ್ಲ ಎಂಬದುನ್ನು ದೇಶ ತಿಳಿಯಬಯಸುತ್ತದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ, ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ‘ ಎಂದು ಸಂಪಾದಕೀಯ ಹೇಳಿದೆ.
ಮುಂಬೈನಲ್ಲಿ, ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಇದರರ್ಥ ‘ಇದು ಪಾಕಿಸ್ತಾನವಲ್ಲ‘. ಪಾಕಿಸ್ತಾನದ ಹಸ್ತಕ್ಷೇಪ ಇರುವಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಲಾಗುತ್ತದೆ‘ ಎಂದು ಸೇನಾ ಹೇಳಿದೆ. ‘ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ಅನುಮತಿ ನೀಡದಿರುವ ಬಗ್ಗೆ ನಟಿ ಕೋಪಗೊಳ್ಳಬೇಕು‘ ಎಂದು ನಟಿ ಕಂಗನಾ ಹೆಸರು ಹೇಳದೇ, ಸೇನಾ ಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.