
ಅಹಮದಾಬಾದ್: ಪ್ರಿಯತಮನ ಜೊತೆ ಸೇರಿಕೊಂಡು ಗಂಡನನ್ನು ಬರ್ಬರ ಕೊಲೆ ಮಾಡಿರುವ ಪತ್ನಿಯು, ಮೃತದೇಹವನ್ನು ತುಂಡು ತುಂಡಾಗಿಸಿ ಅಡುಗೆ ಮನೆಯಲ್ಲಿ ಹೂತು ಹಾಕಿರುವ ಘಟನೆಯು ಅಹಮದಾಬಾದ್ನಲ್ಲಿ ಜರುಗಿದ್ದು, ಬುಧವಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಿಯ ಶೈಲಿಯ ಈ ಘಟನೆಯು ಮಲಯಾಳಂ ಸಿನಿಮಾ ‘ದೃಶ್ಯ’ವನ್ನು ನೆನಪಿಗೆ ತರುವಂತಿದೆ ಎಂದಿದ್ದಾರೆ.
ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಸಮೀರ್ ಅನ್ಸಾರಿ ಅವರು 2016ರಲ್ಲಿ ಅಹಮದಾಬಾದ್ಗೆ ವಲಸೆ ಬಂದಿದ್ದರು. ರೂಬಿ ಜೊತೆ ಪ್ರೀತಿಸಿ ಮದುವೆಯಾಗಿದ್ದ ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು ಎಂದು ಹೇಳಿದ್ದಾರೆ.
ಕೆಲವು ವರ್ಷಗಳಿಂದ ರೂಬಿಗೆ ಅದೇ ಬಡಾವಣೆಯಲ್ಲಿದ್ದ ಇಮ್ರಾನ್ ವಘೇಲಾ ಎನ್ನುವವನ ಜೊತೆ ಪ್ರೇಮಾಂಕುರವಾಗಿತ್ತು. ಪತ್ನಿಯ ಅಕ್ರಮ ಸಂಬಂಧದ ವಿಷಯ ಅನ್ಸಾರಿಗೆ ತಿಳಿದು, ದಂಪತಿಗಳ ನಡುವೆ ಜಗಳವಾಗಿತ್ತು ಎಂದು ತಿಳಿಸಿದ್ದಾರೆ.
ಕೆಲವು ತಿಂಗಳಿನಿಂದ ಅನ್ಸಾರಿ ನಾಪತ್ತೆಯಾಗಿದ್ದಾರೆ ಎನ್ನುವ ಸುಳಿವಿನ ಆಧಾರದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಂಗಳವಾರ ರಾತ್ರಿ ಅವರ ಮನೆಯ ಅಡುಗೆ ಮನೆಯೊಳಗೆ ಹೂತಿಟಿದ್ದ ಮೃತದೇಹದ ಅವಶೇಷಗಳು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವರ್ಷದ ಹಿಂದೆ ರೂಬಿ ಹಾಗೂ ವಘೇಲಾ ಸೇರಿಕೊಂಡು ಅನ್ಸಾರಿಯನ್ನು ಮನೆಯೊಳಗೆ ಕೊಲೆ ಮಾಡಿದ್ದಾರೆ. ಇದಕ್ಕಾಗಿ ವಘೇಲಾ ಅವರ ಇಬ್ಬರು ಸಂಬಂಧಿಕರು ಸಹಾಯ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಅವರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅಡುಗೆ ಮನೆಯೊಳಗೆ ಗುಂಡಿ ತೋಡಿ ಹೂತಿಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಕೆಲವು ತಿಂಗಳು ಅದೇ ಮನೆಯಲ್ಲಿ ವಾಸವಿದ್ದ ರೂಬಿ, ನಂತರ ತಲೆ ಮರೆಸಿಕೊಂಡಿದ್ದು, ವಘೇಲಾ ಅವರನ್ನು ಬಂಧಿಸಲಾಗಿದೆ. ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.