ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿಖಿತಾ ಕೌಲ್ ಅವರು ಸೇನೆಗೆ ಸೇರಿದ್ದಾರೆ.
ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸೇನೆಯ ಉತ್ತರ ವಿಭಾಗದ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ವೈ.ಕೆ ಜೋಶಿ ಅವರು ನಿಖಿತಾ ಅವರ ಭುಜಕ್ಕೆ ’ಸ್ಟಾರ್’ ತೊಡಿಸಿದರು.
‘2019ರಲ್ಲಿ ಪುಲ್ವಾಮದಲ್ಲಿಮೇಜರ್ ವಿಭೂತಿ ಶಂಕರ್ ಅವರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಇವತ್ತು ಅವರ ಪತ್ನಿ ನಿಖಿತಾ ಕೌಲ್ ಅವರು ಭಾರತೀಯ ಸೇನೆಗೆ ಸೇರ್ಪಡೆಯಾಗುವ ಮೂಲಕ ತನ್ನ ಪತಿಗೆ ಗೌರವ ಸಲ್ಲಿಸಿದ್ದಾರೆ’ ಎಂದು ರಕ್ಷಣಾ ಸಚಿವಾಲಯದ ಉಧಂಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಟ್ವೀಟ್ ಮಾಡಿದ್ದಾರೆ.
‘ಯೋಧ ಇಲ್ಲದಿದ್ದರೂ ಆತನ ಕುಟುಂಬವನ್ನು ಸೇನೆಯು ಯಾವತ್ತೂ ಒಂಟಿಯಾಗಲು ಬಿಡುವುದಿಲ್ಲ. ಉಗ್ರರ ವಿರುದ್ಧದ ಹೋರಾಟದಲ್ಲಿ ತನ್ನ ಗಂಡನನ್ನು ಕಳೆದುಕೊಂಡ ವೀರವನಿತೆ ಈಗ ಸೇನೆಯ ಸಮವಸ್ತ್ರ ಧರಿಸಿದ್ದಾಳೆ. ಇದು ಸೇನೆಯ ನಿಜವಾದ ಮೌಲ್ಯ ಮತ್ತು ನೀತಿ ಏನೆಂಬುದನ್ನು ಹೇಳುತ್ತಿದೆ’ ಎಂದು ಟ್ವಿಟರ್ ಬಳಕೆದಾರರಾದ ಸ್ವಪ್ನಿಲ್ ಪಾಂಡೆ ಶ್ಲಾಘಿಸಿದ್ದಾರೆ. ಈ ಬಗ್ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹುತಾತ್ಮ ಮೇಜರ್ ವಿಭೂತಿ ಶಂಕರ್ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.