ADVERTISEMENT

ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧ: ಭಾರತದ ಸೇನೆ ಎಚ್ಚರಿಕೆ

ಲಡಾಖ್‌ನಲ್ಲಿ ಚೀನಾದ ಆಕ್ರಮಣಕ್ಕೆ ಭಾರತದ ಸೇನೆ ಎಚ್ಚರಿಕೆ

ಪಿಟಿಐ
Published 7 ಫೆಬ್ರುವರಿ 2023, 15:13 IST
Last Updated 7 ಫೆಬ್ರುವರಿ 2023, 15:13 IST
ಶ್ರೀನಗರದಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಸೇನೆಯ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಸೇನಾ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು –ಪಿಟಿಐ ಚಿತ್ರ 
ಶ್ರೀನಗರದಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಸೇನೆಯ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಸೇನಾ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು –ಪಿಟಿಐ ಚಿತ್ರ    

ಶ್ರೀನಗರ: ‘ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ದೇಶದ ಸಮಗ್ರತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದ್ದು, ಲಡಾಖ್‌ ಭಾಗದಲ್ಲಿ ಚೀನಾದ ಯಾವುದೇ ಆಕ್ರಮಣಕ್ಕೂ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧ’ ಎಂದು ಭಾರತೀಯ ಸೇನೆಯು ಮಂಗಳವಾರ ಹೇಳಿದೆ.

ಉತ್ತರ ಕಮಾಂಡರ್ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ‘ಪ್ರಸ್ತುತ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧವು ಉದ್ಯೋಗಕ್ಕೆ ಕುತ್ತು ತರುವಂಥ ಹಾಗೂ ತಂತ್ರಜ್ಞಾನದ ಸದ್ಬಳಕೆ ಮತ್ತು ದುರ್ಬಳಕೆಯಂಥ ಅನೇಕ ಪಾಠಗಳನ್ನು ನಮ್ಮ ಮುಂದಿಟ್ಟಿದೆ’ ಎಂದರು.

‘ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಪ್ರಯತ್ನಗಳನ್ನು ಭಾರತವು ತನ್ನ ಸಶಸ್ತ್ರ ಪಡೆಗಳಿಂದ ತ್ವರಿತ, ನಿರ್ಭೀತ ಮತ್ತು ಸಂಯೋಜಿತ ಕ್ರಮದಿಂದ ಎದುರಿಸಲಿದೆ. ಯಾವುದೇ ಪ್ರತಿಕೂಲ ಹಾಗೂ ಆಕ್ರಮಣಕಾರಿ ಪ್ರಯತ್ನಗಳನ್ನು ಸೇನಾಪಡೆಗಳು ದೃಢವಾಗಿ ಹಿಮ್ಮೆಟ್ಟಿಸಲಿವೆ’ ಎಂದೂ ಅವರು ಹೇಳಿದರು.

ADVERTISEMENT

‘ಇದರ ಜತೆಗೇ, ವಾಸ್ತವ ನಿಯಂತ್ರಣ ರೇಖೆಯ ಪರಿಸ್ಥಿತಿಯನ್ನು ಪರಿಹರಿಸಲು ರಾಜತಾಂತ್ರಿಕ ಹಾಗೂ ಕಾರ್ಯಾಚರಣೆ ಹಂತಗಳಲ್ಲೂ ಪ್ರಯತ್ನಗಳು ನಡೆಯುತ್ತಿವೆ. ಪೂರ್ವ ಲಡಾಖ್‌ನಲ್ಲಿನ ಎಲ್‌ಐಸಿಯಲ್ಲಿ ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ನಾವು ಪ್ರಾಬಲ್ಯ ಸಾಧಿಸಿದ್ದು, ಈ ಮೂಲಕ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಖಾತ್ರಿಪಡಿಸಲಾಗುತ್ತಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ವಿವರಿಸಿದರು.

‘ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿನ ಭದ್ರತೆಯು ಅನೇಕ ರೀತಿಯ ಸವಾಲುಗಳನ್ನು ಒಡ್ಡುತ್ತದೆ. ವಿಶೇಷವಾಗಿ ಉತ್ತರ ಮತ್ತು ಪಶ್ಚಿಮ ಗಡಿಭಾಗಗಳಲ್ಲಿನ ವಿರೋಧಿಗಳಿಂದ ಸವಾಲುಗಳನ್ನು ಎದುರಿಸಲಾಗುತ್ತಿದೆ. ಆದಾಗ್ಯೂ ನಮ್ಮ ಸೇನಾ ಪಡೆಗಳು ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಕಂಕಣಬದ್ಧವಾಗಿದೆ. ಗಡಿಯಲ್ಲಿ ಭಾರತೀಯ ಸೇನಾಪಡೆಯು ನಿರಂತರವಾಗಿ ಎಲ್ಲಾ ಬೆಳವಣಿಗೆಗಳನ್ನು ಮೇಲ್ವಿಚಾರಣೆ ನಡೆಸುತ್ತಿದೆ. ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ’ ಎಂದರು.

‘ಸೈಬರ್ ಮತ್ತು ಬಾಹ್ಯಾಕಾಶವು ಯುದ್ಧದ ಹೊಸ ಕ್ಷೇತ್ರಗಳಾಗಿ ಹೊರಹೊಮ್ಮಿವೆ. ಇಂಥ ಆಧುನಿಕ ಯುದ್ಧ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ನಮ್ಮನ್ನು ನಾವು ಸಜ್ಜುಗೊಳಿಸುವುದು ಅತ್ಯಗತ್ಯವಾಗಿದ್ದು, ಭವಿಷ್ಯದಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಭಾರತೀಯ ಸೇನಾಪಡೆಯು ಸನ್ನದ್ಧವಾಗಿದೆ’ ಎಂದೂ ಅವರು ತಿಳಿಸಿದರು.

ಲಡಾಖ್‌ನ ಸೈನಿಕರು ಮತ್ತು ಸ್ಥಳೀಯ ನಿವಾಸಿಗಳ ಜೀವನವನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ ದ್ವಿವೇದಿ ಅವರು, ‘ಎತ್ತರದ ಪ್ರದೇಶಗಳಲ್ಲಿ ಸೈನಿಕರ ಸಾಮರ್ಥ್ಯವನ್ನು ಹೆಚ್ಚಿಸಲು ಏಳು ಪದರಗಳ ವಿಶೇಷ ಉಡುಪುಗಳು ಮತ್ತು ಪರ್ವತಾರೋಹಣ ಉಪಕರಣಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗಡಿಭಾಗದ ಕುಗ್ರಾಮಗಳಲ್ಲಿ 4ಜಿ ಹಾಗೂ 5 ಜಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಸಂವಹನ ಸಚಿವಾಲಯದ ಜತೆಗೂಡಿ ಸೇನೆಯು ಈಗಾಗಲೇ ಲಡಾಖ್ ಹಾಗೂ ಜಮ್ಮು–ಕಾಶ್ಮೀರದ ಸುಮಾರು 144 ಕುಗ್ರಾಮಗಳನ್ನು ಗುರುತಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.