ಜಮ್ಮು: ಭಾರತದ ತ್ರಿವರ್ಣ ಧ್ವಜ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಧ್ವಜವನ್ನು ಜೊತೆಯಾಗಿ ಹಿಡಿದುಕೊಳ್ಳುವುದಾಗಿ ಸೋಮವಾರ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದುಗೊಳಿಸಿದ ನಿರ್ಧಾರವನ್ನು ಹಿಂಪಡೆಯುವವರೆಗೂ, ಚುನಾವಣೆಗೆ ನಿಲ್ಲಲು ಅಥವಾ ರಾಷ್ಟ್ರಧ್ವಜವನ್ನು ಹಿಡಿದುಕೊಳ್ಳಲು ನನಗೆ ಆಸಕ್ತಿ ಇಲ್ಲ’ ಎಂದು ಕಳೆದ ತಿಂಗಳು ಮುಫ್ತಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆದಿತ್ತು.
ಐದು ದಿನಗಳ ಜಮ್ಮು ಪ್ರವಾಸದಲ್ಲಿರುವ ಮುಫ್ತಿ, ‘ಶಾಸಕಿಯಾಗಿ ಜಮ್ಮು ಮತ್ತು ಕಾಶ್ಮೀರದ ಸಂವಿಧಾನದ ಮೇಲೆ ತಮಗಿರುವ ನಂಬಿಕೆ ಹಾಗೂ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದರು.
ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್)ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದ ಅವರು, ‘ಚಡ್ಡಿ ಹಾಕಿಕೊಂಡು ಓಡಾಡುವವರು ತಮ್ಮ ಕೇಂದ್ರ ಕಚೇರಿಯಲ್ಲೇ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. ಇವರು ರಾಷ್ಟ್ರಧ್ವಜದ ಬಗ್ಗೆ ನಮಗೆ ಪಾಠ ಮಾಡುತ್ತಾರೆ. ವಿಶೇಷಾಧಿಕಾರ ರದ್ದುಗೊಳಿಸುವುದರ ಮೂಲಕ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಬೇರ್ಪಡಿಸುವಮುಖಾಂತರ ದೇಶದೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ಸಂಬಂಧವನ್ನು ಬಿಜೆಪಿ ಒಡೆದಿದೆ’ ಎಂದು ಅವರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.