ADVERTISEMENT

‘ಶೇ 80 ಮರಗಳನ್ನು ಸ್ಥಳಾಂತರಿಸುವುದು ಕಡ್ಡಾಯ’

ಪಿಟಿಐ
Published 5 ಅಕ್ಟೋಬರ್ 2020, 12:02 IST
Last Updated 5 ಅಕ್ಟೋಬರ್ 2020, 12:02 IST
ಅರವಿಂದ್‌ ಕೇಜ್ರಿವಾಲ್‌ 
ಅರವಿಂದ್‌ ಕೇಜ್ರಿವಾಲ್‌    

ನವದೆಹಲಿ: ‘ಕಾಮಗಾರಿಗೆ ಅಡ್ಡಲಾಗಿರುವ ಮರಗಳ ಪೈಕಿ ಶೇ 80ರಷ್ಟು ಮರಗಳನ್ನು ಕಂಪನಿಯು ಹೊಸ ಜಾಗಕ್ಕೆ ಕಡ್ಡಾಯವಾಗಿ ಸ್ಥಳಾಂತರಗೊಳಿಸಬೇಕು ಎನ್ನುವ ನೀತಿಯನ್ನುಸರ್ಕಾರವು ಶೀಘ್ರದಲ್ಲೇ ಜಾರಿಗೊಳಿಸಲಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ತಿಳಿಸಿದರು.

‘ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಸಂದರ್ಭದಲ್ಲಿ ಮರ ಕಡಿಯುವುದು ಕೆಲವೊಮ್ಮೆ ಅನಿವಾರ್ಯ.ಸರ್ಕಾರದ ನೀತಿಯಂತೆ ಇಲ್ಲಿಯವರೆಗೂ, ಒಂದು ಮರ ಕಡಿದರೆ, 10 ಗಿಡಗಳನ್ನು ನೆಡಬೇಕು ಎನ್ನುವ ನಿಯಮವಿತ್ತು. ಈ ಗಿಡಗಳು ಮರವಾಗಿ ಬೆಳೆಯಲು ಎಷ್ಟು ಸಮಯ ಬೇಕು ಎನ್ನುವುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಈ ಹೊಸ ನೀತಿಯನ್ನು ಜಾರಿಗೊಳಿಸುತ್ತಿರುವುದಾಗಿ’ ಕೇಜ್ರಿವಾಲ್‌ ತಿಳಿಸಿದರು.

‘ಉಳಿದಂತೆ ಕಡಿದ ಮರಗಳಿಗೆ ಕಡ್ಡಾಯವಾಗಿ 10 ಗಿಡಗಳನ್ನು ನೆಡಬೇಕು ಎನ್ನುವ ನಿಯಮ ಜಾರಿಯಲ್ಲಿ ಇರಲಿದೆ’ ಎಂದರು.

ADVERTISEMENT

ವಾಯುಮಾಲಿನ್ಯದಿಂದ ಪ್ರಾಣಕ್ಕೆ ಅಪಾಯ

‘ಕೋವಿಡ್‌–19 ಪಿಡುಗಿನ ಈ ಸಂದರ್ಭದಲ್ಲಿ ವಾಯುಮಾಲಿನ್ಯವೂ ಜೀವಕ್ಕೆ ಮಾರಕವಾಗಬಲ್ಲದು’ ಎಂದು ಕೇಜ್ರಿವಾಲ್‌ ಎಚ್ಚರಿಸಿದರು.

‘ಯುದ್ಧ, ವಾಯುಮಾಲಿನ್ಯದ ವಿರುದ್ಧ’ ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‌ ಹಾಗೂ ವಾಯುಮಾಲಿನ್ಯ ಎರಡೂ ಶ್ವಾಸಕೋಶಕ್ಕೆ ಹಾನಿ ಉಂಟುಮಾಡುತ್ತವೆ. ‘ಗ್ರೀನ್‌ ದೆಹಲಿ’ ಹೆಸರಿನ ಮೊಬೈಲ್‌ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಮೂಲಕ ಎಲ್ಲೆಲ್ಲಿ ತ್ಯಾಜ್ಯವನ್ನು ಸುಡಲಾಗುತ್ತಿದೆ, ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯವನ್ನು ಜನರು ಸರ್ಕಾರದ ಗಮನಕ್ಕೆ ತರಬಹುದು. ಈ ದೂರುಗಳನ್ನು ಪರಿಹರಿಸಲು ನಿಗದಿತ ಸಮಯವನ್ನೂ ಸೂಚಿಸಲಾಗುವುದು. ಇದನ್ನು ನಾನೇ ನಿತ್ಯವೂ ಪರಿಶೀಲಿಸುತ್ತಿರುತ್ತೇನೆ’ ಎಂದರು.

ಎರಡು ಉಷ್ಣ ವಿದ್ಯುತ್‌ ಸ್ಥಾವರಗಳು ಸ್ಥಗಿತ: ‘ದೆಹಲಿಯ 300 ಕಿ.ಮೀ ವ್ಯಾಪ್ತಿಯಲ್ಲಿ 11 ಉಷ್ಣ ವಿದ್ಯುತ್‌ ಸ್ಥಾವರಗಳಿದ್ದು, ಇವುಗಳು ಮಾಲಿನ್ಯ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ವಿಫಲವಾಗಿವೆ’ ಎಂದ ಕೇಜ್ರಿವಾಲ್‌ ಅವರು ‘ಎರಡು ಉಷ್ಣ ವಿದ್ಯುತ್‌ ಸ್ಥಾವರಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.