ಕೋಯಮತ್ತೂರು: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹಿಂದೂಗಳ ಹಬ್ಬಕ್ಕೆ ಶುಭ ಕೋರುತ್ತಾರೆಯೇ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಕೋಯಮತ್ತೂರು ದಕ್ಷಿಣ ಕ್ಷೇತ್ರದ ಶಾಸಕಿ ವಾನತಿ ಶ್ರೀನಿವಾಸನ್ ಪ್ರಶ್ನಿಸಿದ್ದಾರೆ.
'ದ್ರಾವಿಡ ಸಂಸ್ಕೃತಿ' ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲವರು ಡಿಎಂಕೆಯನ್ನು ಹಿಂದೂ ವಿರೋಧಿಯಾಗಿ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂಬ ಸ್ಟಾಲಿನ್ ಆರೋಪಕ್ಕೆ ಸಂಬಂಧಿಸಿ ವಾನತಿ ಶ್ರೀನಿವಾಸನ್ ಪ್ರತಿಕ್ರಿಯಿಸಿದರು.
ಭಾರತದ ದಕ್ಷಿಣ ಭಾಗಗಳನ್ನು 'ದ್ರಾವಿಡಮ್' ಎಂದು ಕರೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಜೀವಿಸುತ್ತಿರುವ ಎಲ್ಲರೂ ದ್ರಾವಿಡರು. ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ದ್ರಾವಿಡಮ್ ರಚನೆಯಾಯಿತು. ಇದರ ಫಲಿತಾಂಶವಾಗಿ ಜಸ್ಟಿಸ್ ಪಾರ್ಟಿ, ದ್ರಾವಿಡರ್ ಕಳಗಂ ನಂತರ ಡಿಎಂಕೆ ರಚನೆಯಾಯಿತು ಎಂದು ವಾನತಿ ಶ್ರೀನಿವಾಸನ್ ಹೇಳಿದರು.
'ತಮ್ಮ ಸರ್ಕಾರವು ಯಾವುದೇ ಧರ್ಮದ ನಂಬಿಕೆಗೆ ವಿರುದ್ಧವಾಗಿಲ್ಲ. ಆದರೆ ಧರ್ಮಾಂಧತೆಯನ್ನು ವಿರೋಧಿಸುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದರು.
ರಾಜ್ಯ ಸರ್ಕಾರ ಹಿಂದೂ ಧರ್ಮಕ್ಕೆ ವಿರುದ್ಧವಾಗಿಲ್ಲ ಎಂದಾದರೆ ಸ್ಟಾಲಿನ್ ಅವರು ಹಿಂದೂ ಹಬ್ಬಗಳಂದು ಜನರಿಗೆ ಸಾರ್ವಜನಿಕವಾಗಿ ಶುಭ ಕೋರುವುದಿಲ್ಲ ಏಕೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವುದಿಲ್ಲ ಏಕೆ ಎಂದು ವಾನತಿ ಶ್ರೀನಿವಾಸನ್ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.