ADVERTISEMENT

ಮಧ್ಯಪ್ರದೇಶ: ಗೋಮಾಂಸ ಸಾಗಿಸುತ್ತಿದ್ದವರ ಥಳಿಸಿದ ‘ಗೋರಕ್ಷಕರು’; 8 ಮಂದಿ ಬಂಧನ

ಪಿಟಿಐ
Published 25 ಮೇ 2019, 19:34 IST
Last Updated 25 ಮೇ 2019, 19:34 IST
   

ಸಿವಾನಿ: ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ’ಸ್ವಯಂ ಘೋಷಿತ’ ಐವರು ಗೋರಕ್ಷಕರು ಇಬ್ಬರನ್ನು ದೊಣ್ಣೆಯಿಂದ ಥಳಿಸಿರುವ ಕೃತ್ಯ ಮಧ್ಯಪ್ರದೇಶದ ಸಿವಾನಿ ಜಿಲ್ಲೆಯಲ್ಲಿ ನಡೆದಿದೆ.

ಇವರ ಜತೆಗಿದ್ದ ಮಹಿಳೆಗೂ ಅವರಿಂದಲೇ ಚಪ್ಪಲಿಯಿಂದ ಥಳಿಸುವಂತೆ ಈ ಗೋರಕ್ಷಕರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ದುಂಡಾ ಸಿವಾನಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕನ್ಹಿವಾಡಾ ಪ್ರದೇಶದ ಮಂಡ್ಲಾ ರಸ್ತೆಯಲ್ಲಿ ಮೇ 22ರಂದು ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೋರಕ್ಷಕರು ‘ಜೈ ಶ್ರೀ ರಾಮ’ ಎಂದು ಘೋಷಣೆಗಳನ್ನು ಹಾಕುವಂತೆ ಮೂವರನ್ನು ಒತ್ತಾಯಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಗೋರಕ್ಷಕರ ಜತೆಗೆ ಅವರಿಂದಲೇ ಥಳಿಸಿಕೊಂಡ ಮೂವರನ್ನು ಸಹ ಬಂಧಿಸಲಾಗಿದೆ. ಮಧ್ಯಪ್ರದೇಶದಲ್ಲಿ ಗೋಮಾಂಸ ಮಾರಾಟ ಮತ್ತು ಸಂಗ್ರಹಿಸಿಟ್ಟುಕೊಳ್ಳುವುದನ್ನು ನಿಷೇಧಿಸಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ದಾಳಿಯಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ. ಗೋಮಾಂಸ ಸಾಗಿಸುತ್ತಿರುವುದನ್ನು ಆರೋಪಿಗಳು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇವರಲ್ಲಿ ಒಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊವನ್ನು ಮೇ 23ರಂದು ಅಪ್‌ಲೋಡ್‌ ಮಾಡಿದ್ದ. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದರಿಂದ ತೆಗೆದು ಹಾಕಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.

‘ಮೂವರಿಂದ 140 ಕೆ.ಜಿ. ಮಾಂಸ ವಶಪಡಿಸಿಕೊಳ್ಳಲಾಗಿದೆ. ಇದು ಗೋಮಾಂಸ ಎಂದು ಶಂಕಿಸಲಾಗಿದೆ. ಜತೆಗೆ, ತ್ರಿಚಕ್ರ ವಾಹನ ಮತ್ತು ಸ್ಕೂಟರ್‌ ಸಹ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಲಿತ್‌ ಶಕ್ಯಾವರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.