ADVERTISEMENT

ಕಾರಿನಡಿ ಸಿಲುಕಿ 4 ಕಿ.ಮೀ ಸಾಗಿದ ಯುವತಿಯ ಶವ

ದೆಹಲಿಯಲ್ಲಿ ನಡೆದ ಘಟನೆ: ಐವರನ್ನು ಬಂಧಿಸಿದ ಪೊಲೀಸರು

ಪಿಟಿಐ
Published 1 ಜನವರಿ 2023, 21:21 IST
Last Updated 1 ಜನವರಿ 2023, 21:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ 20 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದು, ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ.ವರೆಗೂ ಎಳೆದೊಯ್ದಿರುವ ಘಟನೆ ದೆಹಲಿಯ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

‘ಘಟನೆ ಸಂಬಂಧ ಮಾರುತಿ ಬಲೆನೊ ಕಾರಿನಲ್ಲಿದ್ದ ಐವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆಯ ಮೇಲೆ ಯುವತಿಯ ಮೃತದೇಹ ನಗ್ನಾವಸ್ಥೆಯಲ್ಲಿ ಬಿದ್ದಿರುವ, ಆಕೆಯ ಕಾಲುಗಳು ಮುರಿದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿದೆ.

ADVERTISEMENT

‘ಕುತುಬ್‌ಗಡ ಪ್ರದೇಶದತ್ತ ಹೊರಟಿದ್ದ ಕಾರಿನಡಿ ಯುವತಿಯ ಮೃತದೇಹ ಸಿಲುಕಿತ್ತು. ರೋಹಿಣಿ ಜಿಲ್ಲೆಯ ಖಂಜಾವಲಾ ಪೊಲೀಸ್‌ ಠಾಣೆಗೆ ಬೆಳಿಗ್ಗೆ 3.24ರ ಸುಮಾರಿಗೆ ಈ ಕುರಿತ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗೋಲ್‌
ಪುರಿಯಲ್ಲಿರುವ ಸಂಜಯ್‌ ಗಾಂಧಿ ಸ್ಮಾರಕ
ಆಸ್ಪತ್ರೆಗೆ ರವಾನಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುವತಿಯ ಕಾಲು ಕಾರಿನ ಚಕ್ರವೊಂದರಲ್ಲಿ ಸಿಲುಕಿಕೊಂಡಿತ್ತು. ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ. ವರೆಗೂ ಎಳೆದೊಯ್ಯಲಾಗಿದೆ. ಈ ಸಂಬಂಧ ದೀಪಕ್‌ ಖನ್ನಾ (26), ಅಮಿತ್‌ ಖನ್ನಾ (25), ಕೃಷ್ಣಾ (27), ಮಿಥುನ್‌ (26) ಮತ್ತು ಮನೋಜ್‌ ಮಿತ್ತಲ್‌ ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ 279 ಮತ್ತು 304–ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಸಿಪಿ ಹರೇಂದ್ರಕುಮಾರ್‌ ಸಿಂಗ್‌ ಹೇಳಿದ್ದಾರೆ.

‘ಚಾಲಕ ದೀಪಕ್‌ನಿಂದ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆತ ಮದ್ಯ ಸೇವಿಸಿದ್ದನೊ ಇಲ್ಲವೊ ಎಂಬುದು ವರದಿ ಬಂದ ಬಳಿಕ ಗೊತ್ತಾಗಲಿದೆ. ಯುವತಿಯು ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಕೆಲಸ ಮಾಡುತ್ತಿದ್ದಳು. ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ’ ಎಂದು ತಿಳಿಸಿದ್ದಾರೆ.

‘ಯುವತಿಯ ಮೃತದೇಹವನ್ನು ಕೆಲ ಕಿಲೊ ಮೀಟರ್‌ಗಳವರೆಗೆ ಎಳೆದೊಯ್ಯಲಾಗಿದ್ದು, ಅದು ನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ. ಇದು ಭಯಾನಕ ಘಟನೆ. ಹೀಗಾಗಿ ಸಮಿತಿ ಎದುರು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ’ ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಳಿವಾಲ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.