ದುಮ್ಕಾ (ಜಾರ್ಖಂಡ್):ಗಂಡನೊಂದಿಗೆ ಮಾರ್ಕೆಟ್ನಿಂದ ಮನೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ 17 ಮಂದಿ ಸಾಮೂಹಿಕಅತ್ಯಾಚಾರವೆಸಗಿರುವ ಪ್ರಕರಣ ನಗರದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಆರೋಪಿಗಳೆಲ್ಲರೂ ಮದ್ಯಸೇವನೆ ಮಾಡಿದ್ದರೆನ್ನಲಾಗಿದೆ.
ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ವೇಳೆ ತಮ್ಮ ಪತಿಯೊಂದಿಗೆ ಮಾರ್ಕೆಟ್ನಿಂದ ಮನೆಗೆ ಮರಳುತ್ತಿದ್ದಾಗ 17 ಮಂದಿ ತಮ್ಮನ್ನು ಅಡ್ಡಗಟ್ಟಿದರು. ಎಲ್ಲರೂ ಮದ್ಯಪಾನ ಮಾಡಿದ್ದರು. ಐವರು ತಮ್ಮನ್ನು ಪೊದೆಯತ್ತ ಎಳೆದೊಯ್ದರು. ಉಳಿದವರು ಗಂಡನ ಮೇಲೆ ಹಲ್ಲೆ ಮಾಡಿದರು. ಬಳಿಕ ಎಲ್ಲರೂ ಅತ್ಯಾಚಾರವೆಸಗಿದರು ಎಂದು ಹೇಳಿಕೆ ನೀಡಿದ್ದಾರೆ.
ಮುಫಾಸ್ಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಎಫ್ಐಆರ್ ದಾಖಲಾಗಿದೆ. ಸದ್ಯ ಓರ್ವನನ್ನು ಬಂಧಿಸಲಾಗಿದ್ದು, ಉಳಿದ 16 ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಡಿಐಜಿ ಸುದರ್ಶನ್ ಮಂಡಲ್, ಸಮಗ್ರ ತನಿಖೆ ನಡೆಯುತ್ತಿದ್ದು, ಯಾರೊಬ್ಬರೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.
ಬಿಜೆಪಿ ವಕ್ತಾರ ಪ್ರತುಲ್ ಶಾಹ್ದೋ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಅರಾಜಕತೆ ಇದೆ ಎಂದು ಆರೋಪಿಸಿದ್ದಾರೆ. ‘ಇದು ಜಂಗಲ್ ರಾಜ್ ವ್ಯವಸ್ಥೆ ಇದೆ. ಇದು ಪೈಶಾಚಿಕ ದುಶ್ಕೃತ್ಯವಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದನ್ನು ಇದು ತೋರುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.