ಲಖನೌ: ಮಹಿಳೆಗೆ ತ್ರಿವಳಿ ತಲಾಕ್ ನೀಡಿ ಆಕೆಯ ಮೇಲೆ ಮಾಜಿ ಪತಿ ಮತ್ತು ಮೈದುನ ಹಲವು ಬಾರಿ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹೀನ ಕೃತ್ಯಕ್ಕೆ ಧರ್ಮಗುರು ಮತ್ತು ಇತರರು ಸಹ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ, 6 ಮಂದಿಯ ಸೆರೆಗೆ ಪೊಲಿಸರು ಬಲೆ ಬೀಸಿದ್ದಾರೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, 5 ವರ್ಷಗಳ ಹಿಂದೆ ಆಕೆ ಸಲ್ಮಾನ್ ಎಂಬಾತನನ್ನು ವಿವಾಹವಾಗಿದ್ದರು. ಆದರೆ, ಕೆಲ ತಿಂಗಳ ಹಿಂದೆ ಕಾನೂನುಬಾಹಿರ ವಿಚ್ಛೇದನಾ ಪದ್ಧತಿ ತ್ರಿವಳಿ ತಲಾಕ್ ಮೂಲಕ ಸಲ್ಮಾನ್ ವಿಚ್ಛೇದನಾ ನೀಡಿದ್ದ.
ಬಳಿಕ, ಗುಡ್ಡು ಹಾಜಿ ಎಂಬ ಧರ್ಮಗುರುವಿನ ಸಲಹೆಯ ಮೇರೆಗೆ ತನ್ನ ಕಿರಿಯ ಸಹೋದರನನ್ನು ಮದುವೆಯಾಗಿ ವಿಚ್ಛೇದನ ನೀಡಿದರೆ ಮತ್ತೆ ತನ್ನನ್ನು ಮತ್ತೆ ಹೆಂಡತಿಯಾಗಿ ಸ್ವೀಕರಿಸುವುದಾಗಿ ಸಲ್ಮಾನ್ ಹೇಳಿದ್ದ ಎಂದು ಮಹಿಳೆ ದೂರಿನಲ್ಲಿ ಹೇಳಲಾಗಿದೆ.
ಆಕೆ ಸಲ್ಮಾನ್ ಹೇಳಿದಂತೆ ಕೇಳಿದ್ದಾರೆ. ಆದರೆ, ಕಿರಿಯ ಸಹೋದರ ಆಕೆಗೆ ವಿಚ್ಛೇದನ ನೀಡಲು ನಿರಾಕರಿಸಿದ್ದಾನೆ. ನಂತರ, ಸಹೋದರರಿಬ್ಬರೂ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸಲ್ಮಾನ್ ಭರವಸೆಯ ಮೇರೆಗೆ ಮಹಿಳೆ ಆತನ ಸಹೋದರ ಇಸ್ಲಾಂನನ್ನು ಮದುವೆಯಾಗಿದ್ದಳು. ಆದರೆ, ನಂತರ ಆತ ವಿಚ್ಛೇದನ ನೀಡಲು ನಿರಾಕರಿಸಿದ್ದಾನೆ. ಅಂದಿನಿಂದ, ಸಲ್ಮಾನ್ ಮತ್ತು ಇಸ್ಲಾಂ ಇಬ್ಬರೂ ಹಲವಾರು ಸಂದರ್ಭಗಳಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ’ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಈ ಸಂಬಂಧ ಮಹಿಳೆ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಸೋಮವಾರ ನ್ಯಾಯಾಲಯದ ಆದೇಶದ ನಂತರ ಎಫ್ಐಆರ್ ದಾಖಲಿಸಲಾಗಿದೆ.
ದೂರಿನ ಆಧಾರದ ಮೇಲೆ ಧರ್ಮ ಗುರು ಗುಡ್ಡು ಹಾಜಿ, ಸಲ್ಮಾನ್, ಇಸ್ಲಾಂ ಮತ್ತು ಅವರ ಕುಟುಂಬದ ಇತರ ಮೂವರ ಮೇಲೆ ಸಾಮೂಹಿಕ ಅತ್ಯಾಚಾರ (ಐಪಿಸಿ ಸೆಕ್ಷನ್ 376), ಅಸ್ವಾಭಾವಿಕ ಲೈಂಗಿಕತೆ (377 ಡಿ ಐಪಿಸಿ) ಮತ್ತು 2019ರ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ಎಂದು ಅಧಿಕಾರಿ ಹೇಳಿದರು.
ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.